Tuesday 5 July 2011

ನೆನಪು -- 9



ಮಂಚಿತಡ್ಕದ ಸಂಭ್ರಮದಲ್ಲಿ ಎರಡೋ ಮೂರೋ ವರ್ಷಕ್ಕೊಮ್ಮೆ ಬಂದು, ವಾರದ ತನಕ ಇಲ್ಲಿಯೇ ಬೀಡು ಬಿಡುವ ಸರ್ಕಸ್ ಪಾರ್ಟಿಗಳದ್ದು ಕೂಡಾ ಒಂದು ಪಾಲು!


ಸರ್ಕಾರಿ ಭಾವಿಯ ಹಿಂದೆ, ಮುತ್ತುವಿನ ಬೀಡಿ ಅಂಗಡಿಯ ಮುಂದೆ ಇರುವ ವಿಶಾಲ ಜಾಗದಲ್ಲಿ ಟೆಂಟು ಹೂಡಿ ಬಿಟ್ಟರಾಯಿತು . ಒಂದು ವಾರದ ವರೆಗೂ ಪ್ರತಿದಿನ ಸಾಯಂಕಾಲ ಅವರಾಡುವ ಆಟಗಳನ್ನು ನೋಡಲು ಅಕ್ಕ-

ಪಕ್ಕದ ಊರಿಂದ ಜನ ಜಮಾಯಿಸುತ್ತಾರೆ, ಹಬ್ಬಕ್ಕೆ ಬರುವವರಂತೆ.


ಆ ಸರ್ಕಸ್ ಪಾರ್ಟಿಯಲ್ಲಿರುವವರು ಕೆಲವೇ ಜನ.


ಸುಮಾರು ನಲವತ್ತೈದು - ಐವತ್ತು ವಯಸ್ಸಿನ.. ಬಕ್ಕತಲೆಯ.. ಅವರೆಲ್ಲರ ಯಜಮಾನನೆಂದು ಕರೆಸಿಕೊಳ್ಳುವಾತನೊಬ್ಬ, ಇನ್ನೊಬ್ಬಾತ ಸಣಕಲು ದೇಹದ ಯುವಕ,


ಇನ್ನೊಬ್ಬಳು ತೆಳ್ಳಗಿನ ಸೊಂಟದ, ಕಪ್ಪು ಮೈ ಬಣ್ಣದ ಮತ್ತು ಆಕರ್ಷಕ ಕಂಗಳ ಯುವತಿ, ಮತ್ತೆ ಇನ್ನು ಮೂವರು ಮಕ್ಕಳು. ಹ್ಞಾ... ಮರೆತೆ, ಅಂಗಿ ಚಡ್ಡಿ ತೊಟ್ಟ ಒಂದು ಮಂಗವಿರುತ್ತಿತ್ತು ಜೊತೆಯಲ್ಲಿ.


ಸಂಜೆ ಹೊತ್ತಿಗೆ ಡೈನಾಮೋ'ದ ಭರ್........ನಿಲ್ಲದ ಸದ್ದು.


ಅವರು ಉಳಿದುಕೊಳ್ಳುವ ಟೆಂಟಿನ ಮುಂದೆ ಒಂದು ಚಿಕ್ಕ ವೇದಿಕೆ. ಮತ್ತೆ ಅಲ್ಲೇ ಎದುರಿಗೆ ಸರ್ಕಸ್ ಪ್ರದರ್ಶನ.


ನಡುವೆ ಒಂದು ಎತ್ತರದ ಕಂಬ ನೆಟ್ಟು ಅದರ ತುದಿಗೆ ಮೈಕು ಕಟ್ಟಿ ನಿಲ್ಲಿಸಿ, ಸುತ್ತಲಿನ ಸಮತಟ್ಟು ಸ್ಥಳವನ್ನು ನಿರ್ಮಲಗೊಳಿಸಿ ಬಳ್ಳಿಯಿಂದಲೋ/ತಂತಿಯಿಂದಲೋ ವೃತ್ತಾಕಾರದಲ್ಲಿ ಬೇಲಿ ಕಟ್ಟಲಾಗುತ್ತಿತ್ತು


ಮತ್ತು ಬೇಲಿಯ ನಡು ನಡುವೆ ಟ್ಯೂಬು ಲೈಟುಗಳು.


ಸರ್ಕಸ್ಸು ಶುರುವಾಗುವುದಕ್ಕೆ ಸಾಕಷ್ಟು ಮೊದಲೇ ಮೈಕಿನಲ್ಲಿ ಗಜಮುಖನೆ ಗಣಪತಿಯೇ..ಶುರುವಾಗಿ ನಂತರದಲ್ಲಿ ಚಿತ್ರಗೀತೆಗಳ ಆರ್ಭಟೆ ಮುಂದುವರಿಯುತ್ತಿತ್ತು,


ಇನ್ನೂ ಕೆಲ ಗಂಟೆಗಳ ನಂತರ ಕತ್ತಲು ಮುತ್ತುವಾಗ ಕಟ್ಟಿದ ಬೇಲಿಯ ಒಳಗೆ, ಮೈಕು ಕಟ್ಟಿರುವ ಕಂಬಕ್ಕೆ ಸೈಕಲ್ಲಿನಲ್ಲಿ ಒಂದರ ನಂತರ ಒಂದೆಂಬಂತೆ ಸುತ್ತು ಹಾಕುತ್ತಾ ಹಲವಾರು ರೀತಿಯಲ್ಲಿ ಸೈಕಲ್ ತುಳಿಯುತ್ತ, ಸರ್ಕಸ್ ಶುರು...


ಜನರೆಲ್ಲಾ ಬೇಲಿಯಿಂದಾಚೆಗೆ ನಿಲ್ಲಬೇಕು.


ಯುವಕ ಸೈಕಲ್ ತುಳಿಯುತ್ತಿದ್ದಂತೆ ಓಡಿ ಬಂದ ಆ ಪುಟ್ಟ ಮಕ್ಕಳು ಅವನ ಇಕ್ಕೆಲಗಳಲ್ಲೂ ಹತ್ತಿ ನಿಂತು ಕೈ - ಕಾಲುಗಳನ್ನು ಗಾಳಿಯಲ್ಲಿ ಚಾಚಿ ಬಿಟ್ಟಾಗ


ಇನ್ನೊಬ್ಬ ಹುಡುಗಿ ಅವನ ಭುಜದ ಮೇಲೇರಿ ನಿಂತು ಬಿಡುತ್ತಾಳೆ! ನೋಡುವವರ ಉಸಿರು ಗಂಟಲಲ್ಲೇ ಸಿಕ್ಕಿಕೊಂಡಂತೆ, ಕ್ಷಣಕಾಲ!


ಇನ್ನೊಮ್ಮೆ ಟ್ಯೂಬ್ ಲೈಟಿನ ಬೆಳಕಿನಲ್ಲಿ ಫಳ - ಫಳ ಹೊಳೆಯುವ ಬಟ್ಟೆಯ ಹುಡುಗಿ ಹಗ್ಗದ ಮೇಲೆ ನಿರಾಳವಾಗಿ ನಡೆಯುತ್ತಾ ಬಂದಂತೆ, ನೋಡುತ್ತಾ.. ಕಡ್ಲೆ ಕಾಯಿ ತಿನ್ನುತ್ತಿದ್ದ ಮಕ್ಕಳಿಗೆಲ್ಲ ಬೆರಗಿನ ಸ್ವರ್ಗವೆ ಕಣ್ಣೆದುರಲ್ಲಿ.


ಸ್ವಲ್ಪ ದೂರ ನಿಂತಿರುತ್ತಿದ್ದ ಯಜಮಾನನ ಪಕ್ಕದಲ್ಲಿ ಅಂಗಿ ತೊಟ್ಟ ಮಂಗ ಕ್ಷಣಕ್ಕೊಮ್ಮೆ ಅವನ ಭುಜದ ಮೇಲೇರಿ - ಇಳಿದು ಮಾಡುತ್ತಿತ್ತು.


ಯಜಮಾನನ ಕೈಯಲ್ಲಿ ಉದ್ದನೆ ಬಳ್ಳಿಯ ಮೈಕು. ಮಂಗನನ್ನು ಹಿಡಿದು ನಿಲ್ಲಿಸಿ ಕೆಳುತ್ತಾನವನು, " ಮನೆಯಲ್ಲಿ ಹೆಂಡತಿ ಮುನಿಸಿಕೊಂಡದ್ದು ಹೇಗಪ್ಪಾ ಮಂಗಣ್ಣಾ...? "


ಮಂಗ ಫಕ್ಕನೆ ಮುಂದಕ್ಕೆ ಹಾರಿ ನಿಂತು ತನ್ನ ಹುಬ್ಬುಗಳನ್ನು ಎತ್ತರಿಸಿ ಬಾಯಿತೆರೆದು ಗರಗಸದಂತ ಹಲ್ಲುಗಳನ್ನು ತೋರಿಸುತ್ತಾ ಕತ್ತು ಮುಂದೆ ಮಾಡಿ " ಗುರ್ರ್............. " ಎನ್ನುತ್ತದೆ.


ಜನರಲ್ಲಿ 'ಹೋ....' ಶಬ್ಧದ ನಗೆಯಲೆಗಳು...


" ಮದುವಣಗಿತ್ತಿ ಹೇಗೆ ನಾಚಿಕೊಳ್ತಾಳಪ್ಪೋ.. ಮಂಗಣ್ಣಾ...? " ಸುಮ್ಮನೊಮ್ಮೆ ಮೇಲೆ ಕೆಳಗೆ ನೋಡಿದ ಮಂಗನ ಪಕ್ಕದಲ್ಲಿ ನೆಲದ ಮೇಲೊಂದು ಚಾಟಿ ಏಟು ಫಟ್ಟನೆ ಬಿದ್ದಾಗ


ಗಡಬಡಿಸಿ ಎದ್ದ ಮಂಗ, ತನ್ನೆರಡು ಕಾಲುಗಳ ಮೇಲೆ ನಿಂತು, ಕೈಗಳೆರಡನ್ನು ಎದೆಯ ಮುಂದೆ ಹೊಸೆದು, ತಲೆ ಬಗ್ಗಿಸಿ, ಕೊರಳು ಕೊಂಕಿಸಿ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಬಾಗಿ ಬಳುಕಿ ನಡೆಯುತ್ತದೆ.


ಮತ್ತೆ ಅಪ್ಪಳಿಸುವ ನಗುವಿನಲೆ....


ಮುಂದೆ ಜನರೆಲ್ಲರು ಗುಸು ಗುಸು ನಿಲ್ಲಿಸಿ ಬಿಟ್ಟ ಬಾಯಿ ಬಿಟ್ಟಂತೆ ನಿಲ್ಲುವ ಹೊತ್ತು, ಅವರಲ್ಲಿನ ಆ ಯುವತಿ ಬಣ್ಣ ಬಣ್ಣದ ತುಂಡು ಬಟ್ಟೆಯುಟ್ಟು, ಈಚೆ ವೇದಿಕೆ ಮೇಲೆ ಬಂದಾಗ!!


ಗ್ರಾಮಾಫೋನ್ ತಟ್ಟೆ ತಿರುಗುತ್ತಿದ್ದಂತೆ ಮೈಕಿನಲ್ಲಿ " ಮೆಹೆಬೂಬಾ... ಮೆಹೆಬೂಬಾ..." ಹಾಡು ತೇಲಿ ಬರುತ್ತಾ ಏನೋ ಗುಂಗು ಹಿಡಿದಂತಾಗುತ್ತದೆ..


ಅದರ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ.. ಸೊಂಟ ತಿರುಗಿಸುತ್ತ.. ಬಳುಕುತ್ತ, ಭುಜ - ಕೈಗಳನ್ನು ಕುಣಿಸುತ್ತಾ


ಹೆಣ್ಣು ಮುಂದೆ ಮುಂದೆ ಬಂದರೆ ಜನರೆಲ್ಲ ಸದ್ದಿಲ್ಲದೆ ಅವಳ ಸೊಂಟದಲ್ಲಿ ಕುಲುಕುವ ಗೆಜ್ಜೆಗಳಾಗಿಬಿಡುತ್ತಾರೆ!!


ಹಾಡು ಮುಗಿಯುತ್ತಿದ್ದಂತೆ ಛಕ್ಕನೆ ಅವಳು ಟೆಂಟಿನ ಪರದೆಯ ಹಿಂದೆ ಜಿಗಿದು ಮಾಯವಾದಾಗ, ಅಲ್ಲಿ ಇಲ್ಲಿ ಬೆಪ್ಪಾದಂತಿದ್ದವರ ಬಾಯಲ್ಲಿ ತರ ತರದ ಮಾತುಗಳು...


" ಅವಳು ದುಬೈ ಸೆಂಟು ಹಾಕುತ್ತಾಳಂತೆ.... " - " ಹ್ಞೂ..... ಅವಳೂ ಬೀಡಿ ಸೇದ್ತಾಳಂತೆ... " ಇನ್ನೂ ಏನೇನೋ....


ಬಹಳ ಬಲ್ಲವರಂತೆ ಮಾತಾಡುತ್ತಿದ್ದವರು ಗಂಡಸರೇ. ಯಾಕೆಂದರೆ ಅಲ್ಲಿ ಹೆಂಗಸರ ಸಂಖ್ಯೆ ಬಹಳ ಕಡಿಮೆ ಇರುತ್ತಿತ್ತಲ್ಲ!


ಜನ ಮರುಳಲ್ಲಿ. - ಮಂಡಕ್ಕಿ ಮಾರಾಟ, ಹುರಿದ ಕಡಲೆಕಾಯಿ ಮಾರಾಟ ಜೋರು!


ಆಚೆ ಒಂದು ಮೂಲೆಯಲ್ಲಿ ಪುಟ್ಟ ಕೈಗಾಡಿಯಲ್ಲಿ ಗ್ಯಾಸ್ ಲೈಟಿನ ಬೆಳಕಿಗೆ ಹೊಗೆಯಾಡುವ ಹೆಂಚಿನಿಂದ ಮೊಟ್ಟೆ ದೋಸೆ ಸುಡುವ ವಾಸನೆ... ಹೊಟ್ಟೆಯೊಳಗೆ ಸೌಟಿಟ್ಟು ತೊಳೆಸಿದಂತೆ.


ಇನ್ನೊಂದು ಕಡೆ ಬೀಡಾ - ಪಾನ್ - ಬಾಳೆಹಣ್ಣಿನ ಅಂಗಡಿ..


ಗುಂಪಿನಲ್ಲಿ ನುಗ್ಗಿಕೊಂಡು ನಡೆದಾಡುತ್ತಿದ್ದರೆ ಅವರಿವರ ಬೆವರಿನ ಕಮಟು ವಾಸನೆಗಳ ನಡುವೆ ಹುಳಿ ಹುಳಿ ಸಾರಾಯಿ ಕುಡಿದವರ ತೇಗಿನ ಸದ್ದು.. ಅಸ್ಪಷ್ಟ ಮಾತುಗಳ ಗುಜುಗುಜು..


ತಿಂದದ್ದೆಲ್ಲ ಗಕ್ಕನೆ ಬಾಯಿಗೆ ಬಂದಂತೆ.. ಏನೇ ಆದರೂ ಅಲ್ಲಿ ತಿರುಗುವುದು ಬೇಕು.


ಕಾಲ ಕೆಳಗೆ ಹಸಿ ಹುಲ್ಲಿನೆಡೆ ಹತ್ತು ಸಲ ಕಲ್ಲು ಡನ್ಕಿ ನೋಯಿಸಿಕೊಂಡರೂ ಕಣ್ಣಹೊರಳೆಲ್ಲ ಸರ್ಕಸ್ ಟೆಂಟಿನ ಕಡೆಗೆ!


ಓರಗೆಯ ಪುವಕ್ಕು - ಚೋಮು - ಕಿಟ್ಟು - ಜೋಕ್ಕಿ - ಲಲಿತರೆಲ್ಲ ಸೈನ್ಯ ಕಟ್ಟಿಕೊಂಡವರು, ಗುಂಪಿನಲ್ಲಿ ಕೊಂಚ ಮುಚ್ಚಿಟ್ಟು ಕೊಂಡಂತೆ ಓಡಾಡಿಸುತ್ತಿದ್ದದ್ದು " ಧನಿಕ್ಕುಲೆ ಬಾಲೆ"ಯನ್ನು.


ಊರಿನಲ್ಲಿ ಸ್ವಲ್ಪ ದೊಡ್ಡವರೆಂದು ಕರೆಸಿಕೊಳ್ಳುವವರ ಮಕ್ಕಳು ಅಲ್ಲಿಗೆ ಬರಬಾರದು.


ಹಾಗೆ ನೋಡಿದರೆ ಅಪ್ಪನೂ ಅದೇ ಸಾಲಿಗೆ ಸೇರುವವರಾಗಿದ್ದರೂ, ಕೊನೆಯ ಮಗಳಿಗೆ , "ಅಲ್ಲಿ ಹೋಗಬೇಡ.. ಇಲ್ಲಿ ಹೋಗಬೇಡ.. ಅದು ಮಾಡಬೇಡ.. ಇದು ಬೇಡವೆ ಬೇಡ... "


- ಎಂಬೆಲ್ಲ 'ಬೇಡದ' ವಾಕ್ಯಗಳ ಪ್ರಯೋಗವನ್ನು ಬಹಳ ಮಾಡಿರಲಿಲ್ಲ.


ಬಹುಶ: ಅವೆಲ್ಲ ಅಕ್ಕಂದಿರಿಗೆ - ಅಣ್ಣನಿಗೆ ಹೆಚ್ಚು ಉಪಯೋಗವಾಗಿ, ನನ್ನ ಹೊತ್ತಿಗೆ ತಮ್ಮ ಅರ್ಥ ಕಳೆದುಕೊಂಡವಿರಬೇಕು... :) - ಇಲ್ಲವಾದರೆ ,


ಮಧ್ಯಾಹ್ನ ಎಲ್ಲರ ಹಿತನಿದ್ದೆಯ ಸಮಯದಲ್ಲಿ, ಮಕ್ಕಳ ಜೊತೆ ಸೇರಿ ತೋಟದೊಂದು ತುದಿಯ 'ಅಡಿಬಾಯಿ' ಕೆರೆಯಲ್ಲಿ ಮುಸ್ಸಂಜೆ ತನಕ ಆಡುವುದು ತಿಳಿದ ಮೇಲೂ


"ಬೇಡ" ಪದ ಪ್ರಯೋಗ ಮಾಡದಿರುತ್ತಿದ್ದರೆ??


ಅಬ್ಬಾ.... ಅಡಿಬಾಯಿ ಕೆರೆ ಅದೆಷ್ಟು ಆಳವೋ... ಅಂತೂ ಮಕ್ಕಳು ಮುಳುಗಿದರೆ ಕಾಣದಷ್ಟು ನೀರು ನಿಶ್ಚಯ!


ಎಲ್ಲಿ ಕಾಲಿಟ್ಟರೂ ಹುಗಿದುಕೊಂಡು, ಎದ್ದು ಬರಲಾರದಷ್ಟು ಜವುಗು ನೆಲವಿತ್ತು!!






( ಮುಂದುವರಿಯುತ್ತದೆ. )

Monday 6 June 2011

ನೆನಪು - ೮


'ದೇಯಿ' ಒಳ್ಳೆಯ ಜಾನಪದ ಸೊಗಡಿದ್ದವಳು. ಅವಳ ಮಕ್ಕಳಿಗೂ ಹಾಡುವ ಹುಚ್ಚು. ದೊಡ್ಡವನು ಚನಿಯ, ಎರಡನೆಯವನು ಪುಟ್ಟ

ಮತ್ತೆ ಕೊನೆಯವನು ಬಸವ.


ಚನಿಯ ಗಿಡ್ಡ ಶರೀರದವನು, ದಪ್ಪಗಿದ್ದ, ದಪ್ಪ ಮೀಸೆ ಕೂಡಾ ಬಿಟ್ಟಿದ್ದ. ಅವನದ್ದು ಸಾಮಾನ್ಯವಾಗಿ ಸಂಜೆಯ ಏಳು - ಎಂಟರ ನಂತರ ಬಿದಿರಿನ ಕೊಳಲುವಾದನ!

ಅದು ಎಲ್ಲಿಂದಲೋ ಶುರುವಾಗಿ ಮತ್ತೆ ಅಲೆ - ಅಲೆ ಹೊರಳಿ ಹೇಗೋ ಹೇಗೋ ಸುತ್ತುತ್ತ ಸಾಗಿ ಮತ್ತೆಲ್ಲೋ..ಕೆಲ

ನಿಮಿಷ ನಿಂತೇ ಇದ್ದು, ಒಂದು ರೀತಿಯ ಮೋಡಿ ಹಿಡಿಸಿ ಮತ್ತೊಮ್ಮೆಇದ್ದಕ್ಕಿದ್ದ ಹಾಗೆ ಧಡಕ್ಕನೆ ನಿಂತೇ ಬಿಡುತ್ತಿತ್ತು!!

ಬಸವ ಮುಖದಲ್ಲೆಲ್ಲ ಸಿಡುಬಿನ ಕಲೆಗಳಿದ್ದವನು. ಬಹಳ ರಾಗವಾಗಿ ಸಿಳ್ಳೆ ಹಾಕುತ್ತಿದ್ದ.

ಇನ್ನು ನಡುವಿನವನು ಪುಟ್ಟ ಮಾತ್ರ " ಎಂದೆಂದೂ ನಿನ್ನನು ಮರೆತೂ...

" ಎಂದು ಕೇಳಿದವರು ಮೈ ಮರೆಯುವಂತೆ ಹಾಡುತ್ತಿದ್ದ!


ಆದರೆ ಪುಟ್ಟನ ಹಾಡು ಕೇಳಿ ಮೈ ಮರೆಯುವ ಹೆಚ್ಚು ಅವಕಾಶ ಸಿಗುತ್ತಾ ಇದ್ದಿದ್ದು 'ಬೆಕ್ಕಿನ ಕಣ್ಣಿನ' ನೀರಜನಿಗೆ!


ನೀರಜ ರಾಮನಾಯ್ಕ'ನ ಮಗಳು. ಅವಳ ಮನೆ 'ಗೆದ್ಲು ಮೂಲೆ'ಯ ದಾರಿಯಲ್ಲಿ 'ಬಾಂಡ್ಲ ಹೊಂಡ'ವನ್ನು ಬಳಸಿ

ಬರುವಾಗ ಸಿಗುತ್ತದೆ. (ಇದು ಮೊದಲೇ ಹೇಳಿದಂತೆ ಉಯ್ಯಡ್ಕಕ್ಕೆ ನೇರ ಗುಡ್ಡ ಹತ್ತಿ ಹೋಗುವ ದಾರಿ. ಮತ್ತೆ

ದಾರಿಯನ್ನೇ ಹೆಚ್ಚಾಗಿ ಎಲ್ಲರೂ ಬಳಸುತ್ತಿದ್ದಿದ್ದು.)


ಅಬ್ಬಾ, ಆ ಬಾಂಡ್ಲ ಹೊಂಡವೇ!!


ಹೇಗೆ ಅಲ್ಲಿ ಅಷ್ಟ ದೊಡ್ಡ ಹೊಂಡ ವಾಯಿತೆಂದೇ ಅರ್ಥವಾಗುವುದಿಲ್ಲ! ಗುಡ್ಡದ ಒಂದು ಮೈಯೆ ಎಂಬಂತೆ ಇಳಿಜಾರಿನಲ್ಲಿದ್ದ ಆ ದೊಡ್ಡ ಹೊಂಡದ ಬದಿಯಲ್ಲೇ ದಾರಿ!

ಬಗ್ಗಿ ನೋಡಿದರೆ ಭಯ ಹುಟ್ಟಿಸುವ ದಟ್ಟಪೊದೆಗಳು... ತರ ತರದ ಕಪ್ಪು ಹಸಿರು ಛಾಯೆಗಳು.. ಮಳೆಗಾಲದಲ್ಲಿ ಗುಡ್ಡದ ನೀರೆಲ್ಲ ಹರಿದು ಹಲವು ಸಾಲಾಗಿ ಹೊಂಡದೊಳಗೆ ಬಿದ್ದು ಮಾಯವಾದಂತೆ ಭಾಸವಾಗುತ್ತಿತ್ತು!
(ಇದರೊಳಗೆ ಬಿದ್ದರೆ ಹೇಗಿರಬಹುದೆಂಬ ಯೋಚನೆಗಳು ಪ್ರತಿ ಬಾರಿ ಬಗ್ಗಿದಾಗಲು ಬಾರದೆ ಇರುತ್ತಿರಲಿಲ್ಲ! :)

ಇರಲಿ.. ಅಲ್ಲಿಂದ ಗುಡ್ಡ ಹತ್ತಿ ಬರುವಾಗ ಅಂಬಟೆಕೊಚ್ಚಿಗೂ ಮೊದಲೇ ರಾಮನಾಯ್ಕನ ಮನೆ

ಸಿಗುತ್ತದೆ. ಅವನಿಗೂ ಬೆಕ್ಕಿನ ಕಣ್ಣು, ಉದ್ದ ಶರೀರ.. ಬಿಳೀ ಮೈಬಣ್ಣ.

ಆದರೆ ಅವನ ಕಣ್ಣು ಸದಾ ಆಲಸ್ಯವಿದ್ದಂತೆ. ತೇಲುಗಣ್ಣು. ಮತ್ತೆ ಮಾತು ಒಂದು

ರೀತಿಯ ತೊದಲು. ಅದಕ್ಕೆ ಅವನ ಮುಂದೆ ಮಾತಿಗೆ ನಿಂತರೆ ಮೈಯೆಲ್ಲಾ ಪರಚಿಕೊಳ್ಳುವ ಹಾಗೊಂದು ಇರುಸು ಮುರುಸು.

ನೀರಜನೂ ಹಾಗೇ ಎತ್ತರ.. ಬಿಳೀ ಬಣ್ಣ, ತೊದಲುಮಾತು. ಸುರುಳಿಗೂದಲ ಮೋಟುಜಡೆಯವಳು .

ಅವಳು ಮನೆಯಲ್ಲೇ 'ಬೀಡಿ ಕಟ್ಟುವ' ಕೆಲಸ ಮಾಡುತ್ತಿದ್ದವಳು, ಹಾಗಾಗಿ ಪುಟ್ಟನ ಹಾಡುಗಳನ್ನು ಹೆಚ್ಚಾಗಿ ಕೇಳಿಸಿಕೊಳುತ್ತಲೇ ಇರುತ್ತಿದ್ದಳು
,
ಮತ್ತೆ 'ಏರು ಜೌವನೆ' ನೀರಜ

-
ಪುಟ್ಟ ತನಗೆಂದೇ ಹೊಸ ಹೊಸ ಸಿನೆಮಾ ಗೀತೆಗಳನ್ನು ಕಲಿತು ಹಾಡುತ್ತಾನೆಂದು ಹುಸಿಮುನಿಸು ತೋರಿ ದೂರುತ್ತಿದ್ದವಳು!

ಇವಳ ಮನೆಯಿಂದ ಮುಂದೆ ಸ್ವಲ್ಪ ಮೇಲೆ ಬಂದರೆ ಅಲ್ಲೊಂದು ಸಣ್ಣ ನೀರಿನ 'ಒರತೆ ಗುಂಡಿ'.(ಕಪ್ಪೆ ಗುಂಡಿ) ಮತ್ತೂ

ಹತ್ತು ಹೆಜ್ಜೆ ಹತ್ತಿದರೆ ಬಂದೆ ಬಿಡುತ್ತದೆ ಉಯ್ಯಡ್ಕ ಬೌಂಡರಿ - ಕಲ್ಲಿನ ಅಗರು.

ಆದರೆ ದಾರಿಯುದ್ದಕ್ಕೂ ಹತ್ತುವುದೊಂದೇ ಕೆಲಸ! ಬೇಕಾದಾಗ ಒರತೆ ಗುಂಡಿ ಬಳಿ ಕೊಂಚ ವಿಶ್ರಾಂತಿ.

ಅಂದಹಾಗೆ, ಈ ದಾರಿಯಲ್ಲಿಯೇ ಒಮ್ಮೆ ಬರುವಾಗ ವಿಚಿತ್ರವೆನಿಸಿದ 'ಕಟ -

ಕಟ' ಸದ್ದು ಕೇಳಿದ್ದು, ಮರದ ಬೇರಿನ ಸಂದಿಯಲ್ಲಿ ದೊಡ್ಡದೊಂದು ಹೆಬ್ಬಾವಿನ ದರುಶನವಾದದ್ದು,

ಓಡಿ ಹೋಗಿ ಅಪ್ಪನಿಗೆ ತಿಳಿಸಿದ್ದು, ಅಪ್ಪ - 'ಸಾಯಿರ' (ಇಮಾಮನ ತಮ್ಮ) ನ ಜೊತೆ ಬಂದದ್ದು, ಅವರಿಬ್ಬರೂ

ದೊಡ್ಡ ಕೋಲಿಂದ ಹೆಬ್ಬಾವನ್ನು ತಿವಿದು,
ಅದು ದೊಡ್ಡದಾಗಿ ಬಾಯಿ ತೆರೆದಾಗ ಸಾಯಿರ ಬಲವೆಲ್ಲ ಪ್ರಯೋಗಿಸಿ, ಅದರ ತೆರೆದ ಬಾಯನ್ನು ಎರಡೂ

ಬದಿಗಳಿಂದ ಬಲವಾಗಿ ಅವುಚಿ ಮುಚ್ಚಿ ಹಿಡಿದು ಸುಮಾರು ದೂರದ ವರೆಗೂ
ಕಷ್ಟ ಪಟ್ಟು ಅದನ್ನೆಳೆದು ತಂದು ಕೊನೆಗೆ ಹೇಗೋ ಅದನ್ನೊಂದು ಗೋಣಿ ಚೀಲದೊಳಗೆ ಸೇರಿಸಿ ಮನೆಯಂಗಳಕ್ಕೆ

ಎಳೆದು ತಂದದ್ದು, ಮಾರನೆಯ ದಿನ ಅದನ್ನೊಂದು ಪ್ಲಾಸ್ಟಿಕ್ ಡ್ರಮ್ಮಿನೊಳಗಿಟ್ಟು ಶಾಲೆಗೆ

ತಂದು ಮಕ್ಕಳಿಗೆ 'ಪ್ರದರ್ಶನ'ಕ್ಕಿರಿಸಿದ್ದು..

ಜೊತೆಯ ಮಕ್ಕಳ ಆಶ್ಚರ್ಯಾತಂಕದ ಪ್ರಶ್ನೆಗಳಿಗೆಲ್ಲ, ಇಲಿಯನ್ನೋ ಮೊಲವನ್ನೋ ತಿಂದ ಹೆಬ್ಬಾವು ಮರದ

ಬೇರಿನ ಸಂದು-ಗೊಂದಿನಲ್ಲಿ ನಿಧಾನ ತೆವಳುತ್ತಿದ್ದಾಗ ಕೇಳಿಸಿದ ಸದ್ದಿನಿಂದ ಹಿಡಿದು ಕಥೆಯೆಲ್ಲವನ್ನೂ ಅತ್ಯಂತ ರೋಚಕವಾಗಿ

ಕಣ್ಣರಳಿಸಿ ಹೇಳಿದ್ದು..

ಅದೇ ದಾರಿಯ ಇನ್ನೊಮ್ಮೆ -

ಮೇಲೆ ಹಾರಾಡುತ್ತಿದ್ದ 'ಹೆಲಿಕಾಫ್ಟರ್'ನ ಭಯದಿಂದ ಸಂಗೀತ ತರಗತಿಯಿಂದ ಮರಳುತ್ತಿದ್ದ ದೊಡ್ಡಕ್ಕ ಕೊಡೆಯನ್ನು ಬಿಡಿಸಿ ಏದುಸಿರು ಬಿಟ್ಟಿದ್ದಳು!

ಅದು ಕೂಡಾ ಅಲ್ಲಿಯೇ, ಒರತೆಗುಂಡಿಯ ಪಕ್ಕದಲ್ಲಿಯೇ.

ಅಂದು ಅವಳುಟ್ಟಿದ್ದ ಕಿತ್ತಳೆ ಬಣ್ಣದ ಸೀರೆಯ ಒಡಲಲ್ಲೆಲ್ಲ ಕೆನೆಬಣ್ಣದ ಬಿಸ್ಕೆಟ್ಟುಗಳು..

ಅನಿರೀಕ್ಷೀತವಾಗಿ ಭರ್ರನೆ ಸದ್ದು ಮಾಡುತ್ತಾ ತಲೆಯ ಮೇಲಿಂದ ಹಾರಿ ಬಂದ ಸದ್ದಿಗೆ ಬೆಚ್ಚಿಬಿದ್ದ ಅಕ್ಕ
ಮೇಲಿಂದ ಹನಿ ಹನಿಯಾಗಿ ಬೀಳುತ್ತಿದ್ದ ಔಷಧಕ್ಕೆ ( ಎಂಡೋಸಲ್ಫಾನ್) ಹೆದರಿದಳೋ , ಅಂತೂ ಥಟ್ಟನೆ ಗಾಬರಿಗೊಂಡು ಕೊಡೆ ಬಿಚ್ಚಿ ಹಿಡಿದು,

ಮತ್ತೆ ಅದನ್ನು ಪಕ್ಕಕ್ಕೆ ಸರಿಸಿ, ಕತ್ತೆತ್ತಿ ಮೇಲೆ ನೋಡಿದ್ದನ್ನು ನೋಡಿ,
ಅಲ್ಲಿ ಮೇಲೆ ಹೆಲಿಕಾಫ್ಟರ್' ನೊಳಗಿದ್ದ ಯುವಕ ಮುಸಿ ಮುಸಿ ನಕ್ಕದ್ದು, ಮತ್ತೆ

ಆ ಹೆಲಿಕಾಫ್ಟರ್ ಐದಾರು ಬಾರಿ ಅದೇ ದಾರಿಯಾಗಿ ಹಾರಿದ್ದೆಲ್ಲ ತಪ್ಪದೆ ಗಮನಕ್ಕೆ ಬಂದದ್ದು.

ಆ ದಾರಿಯಲ್ಲಿ ಬಿದ್ದದ್ದಕ್ಕಂತೂ ಲೆಕ್ಖವಿಲ್ಲ. ದಾರಿ ಬಿಟ್ಟು, ಗುಡ್ದದಲ್ಲಿಲ್ಲಿಳಿದು ಕಾಡು ಮಾವಿನ ಹಣ್ಣು ಹೆಕ್ಕಿದ್ದು, ನೆಲ್ಲಿ ಕಾಯಿ, ಶಾಂತಿ ಕಾಯಿ, ಚೂರಿಮುಳ್ಳು

ಹಣ್ಣು, ಗೆರುಹಣ್ಣು, ನೇರಳೆ, ಪೇರಳೆ, ಒಂದೇ..ಎರಡೇ.. ಅವೆಷ್ಟು ಹಣ್ಣು - ಕಾಯಿಗಳು
ಪುಸ್ತಕ ಚೀಲದೊಳಗೆ, ಪೆನ್ಸಿಲ ಡಬ್ಬದೊಳಗೆ. ತಿಂದ ರುಚಿ ಬಾಯೊಳಗೆ, ತೃಪ್ತಿಯ ಖುಷಿ ಕಣ್ಣೊಳಗೆ!

Thursday 17 February 2011

ಕೆಳಗಿಳಿಯುವಂತಿಲ್ಲ ಎಂದೂ.


ಅವನ ಕೈ ಹಿಡಿದು ಏರಿ ಹೋದೆ ಮೆಟ್ಟಲುಗಳ ಮೇಲೆ. - ತಿರುಗಿ ಮೇಲೆ ಮೇಲೆ.
ಏರುತ್ತಿದ್ದಂತೆ ಒಂದೊಂದೆ ಜರಿದು ಬಿದ್ದವು ಹಿಂದೆ, ಈ ಮೊದಲು ಏರಿದವೆಲ್ಲ ಅಲ್ಲೆ!
ಇನ್ನೀಗ ಹೋದರೆ ಮೇಲೆಯೇ ಹೋಗಬೇಕು, ಕೆಳಗಿಳಿಯುವಂತಿಲ್ಲ ಎಂದೂ!
ಅವ ಕರೆದನೋ ನಾ ಹೋದೆನೋ ಅರ್ಥವಾಗದೆ ಹಿಂದುಮುಂದೊಂದೂ!

ಅದೊ ಅಲ್ಲಿ ತಂಪ್ತಂಪು ತಂಬೆಳಕ ರಾಶಿ, ಮೇಲಿನ್ನು ಮೆಟ್ಟಲುಗಳಿಲ್ಲ,
ಎಲ್ಲೆಲ್ಲು ಬೆಳ್ ಬೆಳಕು ಬಿಳಿ ನೊರೆಯ ತೊರೆಯಂತೆ, ತೋರ್ದಾತ ಮರೆತ ಸೊಲ್ಲ.
ಇನ್ನೀಗ ಬೇರೇನು ಬಾಧಿಸದ ಹಗುರತೆಯು, ಹಾ, ಬೇಕೆನಿಸುತಿಲ್ಲ ಒಂದೂ.
ಇನ್ನೀಗ ಇದ್ದರೆ ಅಲ್ಲಿಯೇ ಇರಬೇಕು, ಕೆಳಗಿಳಿಯುವಂತಿಲ್ಲ ಎಂದೂ!



Sunday 6 February 2011

ನೆನಪು - ೭

'ಉಯ್ಯಡ್ಕ..' ಹೆಸರು ಹೇಳುತ್ತಿದ್ದರೆ ಮನಸು ಸಂತಸದ ಉಯ್ಯಾಲೆ ತೂಗಿದಂತೆ.., ಜೀವ ಹಿಗ್ಗಿ ಜೀಕಿದಂತೆ!

ಮೊದಲು ಮುಖಮಂಟಪವಿದ್ದಿದ್ದ ಮನೆ, ಅಂದರೆ ಮೂಲಮನೆ 'ಕಟ್ಟದ ಕೋರಿಕಾರಿ'ನಿಂದ ಅಜ್ಜ ಮತ್ತೆ ಅಪ್ಪ ಉಯ್ಯಡ್ಕ ದಲ್ಲಿ ಆಸ್ತಿ ಮಾಡಿಕೊಂಡು ಬಂದಾಗ ಕಟ್ಟಿದ ಮೊದಲಮನೆ.

(ಮತ್ತೆ ಆ ಸಮಯದಲ್ಲಿ ಅಜ್ಜಿ ಮೊದಲಬಾರಿ ಉಯ್ಯಡ್ಕಕ್ಕೆ ಬರುವಾಗ ಅವರನ್ನು ನಾಲ್ಕಾಳು ಜನರು 'ಮೇನೆ'ಯಲ್ಲಿ ಹೊತ್ತು ಕರೆತಂದಿದ್ದರಂತೆ!
ಮಿಕ್ಕಿದವರೆಲ್ಲರೂ ನಡೆದೇ ಬರುವವರು, ಗುಡ್ಡ ತಾನೇ, ರಸ್ತೆಯಿನ್ನೂ ಆಗಿರಲಿಲ್ಲವಲ್ಲ!! ಇರಲಿ..)

ಅನಂತರದಲ್ಲಿ ಅಪ್ಪ ಅದೇಕೋ ಆ ಮುಖಮಂಟಪವನ್ನೊಡೆಸಿ, ಮನೆ 'ಎಲ್' ಆಕೃತಿಯಲ್ಲಿ ಬರುವಂತೆ ಕಟ್ಟಿಸಿದ್ದು.

ಆದರೆ ಆ ಮುಖಮಂಟಪದ ಕಟ್ಟೆ - ಚಿಟ್ಟೆಗಳ ನೆನಪೆಷ್ಟು ಆಪ್ತ..
ಕಟ್ಟೆಯ ಕೆಳಬದಿಯ ಜಗುಲಿಯಲ್ಲೇ ಕಲ್ಲಾಟ.. ಕೆಲವೊಮ್ಮೆ ಸಂಜೆಗೆ ಮೊದಲು ಶಾಲೆಕೆಲಸವೂ ಅಲ್ಲೇ.. ಮತ್ತೆ ಅದೇ ಕಟ್ಟೆಯಿಂದ ಬಿದ್ದು ದೊಡ್ಡಕ್ಕನೂ ಪುಟ್ಟಕ್ಕನೂ ಕೈ ಮುರಿದುಕೊಂಡಿದ್ದು!

ಇಬ್ಬರು ಅಕ್ಕಂದಿರು, ದೊಡ್ಡವನು ಅಣ್ಣ, ಅಪ್ಪ - ಅಮ್ಮ , ಅಜ್ಜ - ಅಜ್ಜಿಯರ ಜೊತೆಯಿದ್ದ ಉಯ್ಯಡ್ಕಮನೆಯ ಪಡಸಾಲೆ - ದೇವರ ಮನೆ - ಊಟದ ಮನೆ, ಮತ್ತಲ್ಲಿನ ರಾತ್ರಿ - ಹಗಲುಗಳು, ಜೀವ ತುಂಬಿದ ಮನೆಯ ಮುಂದಿನ
ಪನ್ನೇರಳೆ ಮರ.. ಅದರಲ್ಲಿ ಅಪ್ಪ ಕಟ್ಟಿಸಿ ಕೊಟ್ಟ ದಪ್ಪ ಬಳ್ಳಿಯ, ಪುಟ್ಟ ಮಣೆಯ ಉಯ್ಯಾಲೆ..

ಶಾಲೆಗೆಂದು ಹೊರಟರೆ, ಮನೆ ಮೆಟ್ಟಲಿಳಿದು ಬಿಳಿ ಮಂಜೆಟ್ಟಿ ಗಿಡಗಳ ಬಳಸಿ, ಮುಂಡಪ್ಪ ಮಾವಿನ ಮರದ ಕೆಳಗಿಂದ ಹತ್ತು - ಹದಿನೈದು ಹೆಜ್ಜೆಗೆ ಸಣ್ಣದೊಂದು 'ಅಗರು' ದಾಟಿ,
ಅಲ್ಲೇ ಮುಂದೆ 'ಮೆಟ್ಲ ಸುರಂಗ' ದ ಬದಿಯಲ್ಲೇ ನಡೆದು ಕಮಲನ ಮನೆಯ ಹತ್ತಿರಕ್ಕೆ ಬಂದು ಅಲ್ಲಿನ್ನೊಂದು ಕಲ್ಲಿನ ದೊಡ್ಡ ಅಗರು ದಾಟಬೇಕು. ಅದು ಉಯ್ಯಡ್ಕ ಜಾಗದ ಬೌಂಡರಿ ಲೈನು.

ಅಗರು(ಕಾಂಪೌಂಡ್) ದಾಟಿದರೆ ಆಚೆಗೆ ಗವರ್ನಮೆಂಟಿನ ಬೀಜದ ಕಾಡು.. ಗೇರುಬೀಜದ ಮರಗಳ ಬ್ಲಾಕು.

ಕೆಲಸದ 'ಲಚ್ಮಿ'ಯ (ಲಕ್ಷ್ಮಿಯ) ಮಗಳು ಪೂವಕ್ಕು, ಚೋಮು, ಸಿವರಾಮ, ಇಮಾಮನ ಮನೆಯ ಜೊಕ್ಕಿ(ಜಾಕಿ), ದವಿದ(ಡೇವಿಡ್), ಎಲ್ಲ ಮಕ್ಕಳೊಂದಿಗೆ ಅಗರು ದಾಟಿ ಬರುವಾಗ ಅಲ್ಲೇ ಇರುವ ಇನ್ನೊಂದು ಕೇರಿ
ಮಕ್ಕಳೂ ಗುಂಪಾಗಿ ಸೇರಿಕೊಳ್ಳುತ್ತಿದ್ದರು. ಊರಿನ ಹಿರಿಯರು, ಪರಿಚಿತರು ಸಿಕ್ಕಾಗ ನಮ್ಮ ಗುಂಪು ಬೇರೆ - ಬೇರೆಯಾದರೂ ಅವರು ಯಾರೂ ಇಲ್ಲದಿದ್ದಾಗ ಎಲ್ಲರೂ ಆಟ ಆಡುತ್ತಿದ್ದುದು ಒಟ್ಟಾಗಿಯೇ.

ಈಗ, ಅವರು ದೊಡ್ಡ ಅಗರಿಗೆ ತಾಗಿದ ಹಾಗೆಯೇ ಮನೆಗಳನ್ನು ಮಾಡಿಕೊಂಡಿದ್ದಾರಾದರೂ ಅವರೆಲ್ಲ ಮೊದಲಿದ್ದಿದ್ದು ಉಯ್ಯಡ್ಕ ಗುಡ್ಡಕ್ಕೆ ಸೇರಿದಂತೆಯೇ ಇರುವ ಇನ್ನೊಂದು ಗುಡ್ಡದ ಮಧ್ಯ ಭಾಗದಲ್ಲಿ.

ಅಲ್ಲಿಗೇ ಹೆಸರು 'ಅಂಬಟೆ ಕೊಚ್ಚಿ'! ಆಗಲೇ ಹೇಳಿದೆನಲ್ಲ... ಅಲ್ಲಿ ಕೆಲವು ಹುಣಸೆ ಮರಗಳು , ಅಂಬಟೆ ಮರಗಳೂ ಇರುವುದು ನಿಜ.
ಸಣ್ಣ ಸಣ್ಣ ಕೆಲವು ಗದ್ದೆಗಳು.. ನೀರಿನ ಹೊಂಡಗಳು.
ಅಲ್ಲಿನ ಹುಣಸೆ ಹಣ್ಣಿನ ಮತ್ತು ಗುಡ್ಡದ ನೆಲ್ಲಿಕಾಯಿಗಳ ಆಸೆಯನ್ನು ಹತ್ತಿಕ್ಕಲಾಗದೆ "ಆ ದಾರಿಯಾಗಿ ಹೋಗಬೇಡಿ"ರೆಂಬ ದೊಡ್ಡವರ ಮಾತುಗಳಿಗೆ ಜಾಣ ಕಿವುಡುತನ ತೋರಿ ಆ ದಾರಿಯಾಗಿಯೇ ನುಗ್ಗುತ್ತಿದ್ದ ಹುಮ್ಮಸ್ಸು.

ಅಲ್ಲಿಯೇ ಇದ್ದದ್ದು ತನಿಯ'ನ ಅಮ್ಮ 'ದೇಯಿ'(ದೇವಿ?) ತೊಂಡಿಯ ಮನೆ. ಆ ಮನೆಯ ಮುಂದೆಯೇ ಹಾದುಹೋಗಬೇಕು.

ದೇಯಿ ಕಪ್ಪು ಬಣ್ಣದ ವೃದ್ಧ ಜೀವ. ಲಕ್ಷಣದ ಮುಖದವಳು.

ಅರುವತ್ತೈದೋ...ಎಪ್ಪತ್ತೋ.. ದಾಟಿದ ವಯಸ್ಸಿನಲ್ಲೂ ಅವಳ ಕಣ್ಣುಗಳಲ್ಲಿ ಹೊಳಪು..
ಸದಾ ಉತ್ಸಾಹದ ಬುಗ್ಗೆಯಂತೆ ಕೈಯಲ್ಲಿ ಕತ್ತಿಯೋ, ಅಡಿಕೆ ಹಾಳೆಯೋ, ತೆಂಗು ಸೋಗೆಯೋ ಹಿಡಿದು
ಎದುರಾಗುತ್ತಿದ್ದ ಅವಳ ಹಣೆ..ಕೆನ್ನೆಗಳಲ್ಲಿ ಬಾಗಿದ ಗೆರೆ ಗೆರೆ - ನೆರಿಗೆಗಳು, ಎಲೆ ತಿಂದು ಕೆಪಗಾದ ಬೊಚ್ಚು ಬಾಯಿ.. ಹರಿದೇ ಹೋಗಿದೆಯೇನೋ ಎನ್ನುವಂತೆ ಜೋಲುವ ಅವಳ ಕಿವಿಯ ತೂತುಗಳು..
ರವಕೆ ಇಲ್ಲದೆ, ಕತ್ತಿನ ಮಣಿಸರಗಳಿಗೇ ಸೆರಗು ಸಿಕ್ಕಿಸಿ, ಸೊಂಟಕ್ಕೆ ಎಳೆದು ಸುತ್ತಿದ, ಮೊಣಕಾಲ ಕೆಳಗಿನವರೆಗಿನ ಅವಳ ಸೀರೆ.. ಕತ್ತಿನ ಹಿಂದೆ ಅಂಬಟೆಯಷ್ಟೇ ಪುಟ್ಟದಾದ ನರೆಗೂದಲ ಗಂಟು..
ಕಂಡಾಗಲೆಲ್ಲ 'ಕುೡ ದೆತ್ತಿ'( ಚಿಕ್ಕೆಜಮಾನಿ) ಎಂದು ಬಹಳ ಗೌರವದಿಂದ, ಆತ್ಮೀಯತೆಯಿಂದ ಕರೆಯುತ್ತಿದ್ದವಳು.

ಆ ಇಳಿಜಾರು ಅಂಬಟೆಕೊಚ್ಚಿಯ ಗದ್ದೆಗಳಲ್ಲಿ ಇನ್ನೂ ಕೆಲವು ಹೆಣ್ಗಳ ಜೊತೆ ಸೇರಿ 'ನೇಜಿ' ನೆಡುವಾಗ ದೇಯಿ ಹಾಡುವ ರಾಗದ 'ಪಾಡ್ದನ'ಗಳನ್ನು ಕೇಳಬೇಕು!

ಚೆನ್ನಾಗಿ 'ಒಬೇಲೆ' ಹೇಳುತ್ತಾಳೆನ್ದೇ ಅವಳು ಆಪ್ತಳೆನ್ನಿಸುತ್ತಿದ್ದುದು. ಅವಳ ದನಿಗೆ ದನಿ ಸೇರಿಸಿ ಹಾಡಿದ ದಿನಗಳಲ್ಲಿ ಮನೆ ಸೇರುವಾಗ ಮುಸ್ಸಂಜೆ ಮೀರಿ ಅಮ್ಮನ ಕಣ್ಣುಗಳ ಆತಂಕಕ್ಕೆ ಗುರಿಯಾಗಿ ಅಲ್ಲೊಮ್ಮೆ ತಿರುಗಿ ದೇಯಿ'ಯ ಹಾಡುಗಳ

ಪುನರಾವರ್ತನೆಯಾದಾಗ ಅಮ್ಮನಿಂದ ಸಿಗುತ್ತಿದ್ದುದು ಮುಗುಳ್ನಗೆ; ಮತ್ತು ಬಿಗಿಯಪ್ಪುಗೆ!



(ಮುಂದುವರಿಯುವುದು...)

Monday 3 January 2011

ನೆನಪು - 6

ಸ್ವರ ಸ್ವಲ್ಪ ದೂರದಿಂದಲೇ ಕೇಳುವುದು... " ವಂದಿಪೆ ನಿನಗೆ ಗಣನಾಥ... ಮೊದಲೊಂದಿಪೆ ನಿನಗೆ..."
ಪುಟ್ಟ ಕಣ್ಣುಗಳನ್ನು ಉರುಟುರುಟಾಗಿ ಅರಳಿಸಿ ಅತ್ತಿತ್ತ ತಿರುಗಿಸುತ್ತಲೇ ಪುಟ್ಟ ಕೈಗಳಿಂದ ಸ್ಕರ್ಟುಗಳನ್ನು ಜಗ್ಗಿ ಜಗ್ಗಿ ಹಿಡಿದೂ.. ಬಿಟ್ಟೂ.. ಮಾಡುತ್ತಾ,
ಕೆಲವೊಮ್ಮೆ ಅಂಗೈ ಬೆವರನ್ನು ಸ್ಕರ್ಟಿಗೊರೆಸುತ್ತ, ಪ್ರಾರ್ಥನೆ ಮುಗಿಯಿತೋ..,
ಎದ್ದೆನೋ..ಬಿದ್ದೆನೋ.. ಎಂದು ಮಕ್ಕಳೆಲ್ಲ ಓಡಿ ಬಂದು ತಮ್ಮ ತಮ್ಮ ಸ್ಥಳದಲ್ಲಿ ಧೊಪ್ಪನೆ ಕುಳಿತಾಗ ವೇದಿಕೆಯ ಮೇಲೆ ಇತರರ ಮಾತುಗಳು ಶುರು..

ಗಾಂಧೀ, ಸುಭಾಷಚಂದ್ರ , ಆಜಾದು, ನೆಹರು.. ಲಾಲ್ ಬಹಾದ್ದೂರ್.. ಹೆಸರುಗಳ ಮೇಲೆ ಹೆಸರುಗಳು..
ಪಾಠ ಪುಸ್ತಕಗಳಲ್ಲಿ ಕಂಡ ಅವರ ಚಿತ್ರಗಳಿಗೆ ಅವರವರ ಹೆಸರುಗಳನ್ನೂ ಸೇರಿಸುತ್ತಾ, ಆಕಾರಗಳಿಗೆ ಜೀವ ತುಂಬಿಸಿ,
ಅವುಗಳಿಗೆ ಚಲನೆ - ಮಾತುಗಳನ್ನು ಕೊಟ್ಟು ಕಲ್ಪನೆಯ ಚಿತ್ರ ಕಟ್ಟು ಕಟ್ಟುತ್ತ, ಕೆನ್ನೆಗೆ ಕೈ ಕೊಟ್ಟು ಕೇಳಿಯೇ ಕೇಳುತ್ತಿದ್ದ ಪುಟ್ಟ ಜೀವಗಳಿಗೆ
ಕಾರ್ಯಕ್ರಮ ಮುಗಿದ ನಂತರ ಸಿಗುವ ಪೆಪ್ಪೆರುಮಿಂಟಿನ ಸಿಹಿಯ ನೆನಪಾಗಿ, ನಾಲಗೆಯಲ್ಲಿ ನೀರು!
ಹಿರಿಯ ವಿದ್ಯಾರ್ಥಿಗಳು ಇಬ್ಬಿಬ್ಬರು ಬಾಗಿಲ ಪಕ್ಕದಲ್ಲಿ ಆಗಲೇ ಬುಟ್ಟಿ ತುಂಬಾ ಚಾಕೊಲೇಟು ಹಿಡಿದು ಸಿದ್ಧರಾಗಿ ನಿಂತಿರುತ್ತಿದ್ದರಲ್ಲ!!

ದೇಶಭಕ್ತಿಯ ದಿನಗಳು ಹೀಗಾದರೆ ಹಬ್ಬ- ಪೂಜಾದಿನಗಳು ಇನ್ನೂ ವಿಶೇಷವೆನಿಸುತ್ತಿದ್ದವು. ವಿಜಯದಶಮಿಯ ಶಾರದಾಪೂಜೆ ಇರಲಿ, ಚೌತಿಯ ಗಣೇಶನ ಪೂಜೆ ಇರಲಿ, ಕೊನೆಯಲ್ಲಿ ಪ್ರಸಾದ ರೂಪದಲ್ಲಿ
ಬೆಲ್ಲ ಕಲೆಸಿದ ಅವಲಕ್ಕಿ, ಬಾಳೆಹಣ್ಣುಗಳು ಸಿಗುತ್ತಿದ್ದವು.
ಪೂಜೆಗಿಂತ ಮೊದಲು ಮತ್ತು ಪೂಜೆ ಮುಗಿದ ಮೇಲೂ ಬಹಳ ಹೊತ್ತು ಭಜನೆಗಳನ್ನು ಹಾಡುವ ಕ್ರಮವಿತ್ತು.

ಎಲ್ಲ ಮುಗಿದ ಮೇಲೆ ಕಾಗದದಲ್ಲಿ ಹಾಕಿಕೊಟ್ಟ ಪ್ರಸಾದ ಬೆಲ್ಲದವಲಕ್ಕಿಯಲ್ಲಿ ಸ್ವಲ್ಪ ತಿಂದು, ಇನ್ನು ಮಿಕ್ಕಿದ್ದನ್ನು ಹಾಗೆಯೇ ಮಡಿಚಿಟ್ಟುಕೊಂಡು ಗುಂಪು-ಗುಂಪಾಗಿ ಮಕ್ಕಳು ಶಾಲೆಯಿಂದ ಹೊರಬಂದರೆ
ಕೆಲವರ ದಾರಿ ಶಾಲೆಯಿಂದ ಹಿಂದೆ - ಗುಡ್ಡಕ್ಕೆ.. ಇನ್ನು ಕೆಲವರು ಬಲಕ್ಕೆ, ಇನ್ನು ಕೆಲವರು ಎಡಕ್ಕೆ.. ಕೆಲವರು ಕೆಳಗೆ - ಮಂಚಿ ತಡ್ಕ ಪೇಟೆ(!)ಯ ಕಡೆ..
ಇನ್ನು ಕೆಲವರು ಇನ್ನೂ ಆಚೆ..ಆಟದ ಮೈದಾನದಿಂದಾಚೆ ಇರುವ ಗುಡ್ಡದ ಕಡೆಗೆ..
ಹೀಗೆ ಚದುಚದುರಿ ನಡೆಯುತ್ತಿದ್ದ ಪುಟ್ಟ ಮಕ್ಕಳಿಗೆ, ಉತ್ಸಾಹದ ಬುಗ್ಗೆಗಳಿಗೆ ಮಧ್ಯಾಹ್ನದ ಹನ್ನೆರಡು-ಒಂದು ಗಂಟೆಯ ಚುರುಗುಡುವ ಬಿಸಿಲಿನ ಪರಿವೆ ಎಲ್ಲಿ?

ದಾರಿಯುದ್ದಕ್ಕೂ ಕಾರ್ಯಕ್ರಮದ ಬಗ್ಗೆ, ಆ ಮಾಷ್ಟ್ರ ಬಗ್ಗೆ, ಈ ಹುಡುಗನ ಬಗ್ಗೆ, ಮಾತೋ..ಮಾತು.. ನಗು-ಚಟಾಕಿಗಳು... - ಬಾಯಲ್ಲಿ ಬೆಲ್ಲದ ಸಿಹಿ..
ಕಾಲ ಕೆಳಗೆ ಸಿಕ್ಕಿದ ಕೋಲನ್ನೆತ್ತಿಕೊಂಡು, ಪಕ್ಕದ ಪೊದೆಗಳ ಹಸಿರೆಲೆಗಳ ಮೇಲೆ ಸುಮ್ಮ ಸುಮ್ಮನೆ ಖಡ್ಗ ಪ್ರಹಾರವೆಂಬಂತೆ ಬೀಸುವ ಏಟುಗಳು..
ಶಿಸ್ತಿನಲ್ಲಿ ನಡೆಯುವ ಇರುವೆ ಸಾಲುಗಳನ್ನು ಕಾಲಿಂದ - ಕೋಲಿಂದ ತಪ್ಪಿಸಿ, ಅವನ್ನು ಚಲ್ಲಾಪಿಲ್ಲಿಯಾಗಿಸಿ, ಅವಕ್ಕೊಂದಷ್ಟು ಕಿರಿಕಿರಿ ಕೊಟ್ಟು,
ಮೇಲೆ ಹಾರುವ ಕಾಗೆಗೊಂದು ರೊಂಯ್ಯನೆ ಕಲ್ಲು ಬೀಸಿ, 'ಉಯ್ಯಡ್ಕ' ಗುಡ್ಡ ಹತ್ತಲು ಮೊದಲಿಟ್ಟರೆ ಗೇರು ಮರದಲ್ಲಿ ಅಡ್ಡಾಡುವ ಮಂಗಗಳು ಧಡಕ್ಕನೆದ್ದು ಪಕ್ಕದ ಮರಗಳಿಗೆ ಹಾರಿ ದೂರ ಕೂತು, ಹಲ್ಲು ಕಿಸಿಯುತ್ತಿದ್ದವು!

ಉಯ್ಯಡ್ಕ ಗುಡ್ದಕ್ಕೆಲ್ಲ ಅಪ್ಪನದೊಂದೇ ದೊಡ್ಡ ಮನೆ. ಅಲ್ಲಿ ವಿಶಾಲವಾದ ಅಂಗಳಕ್ಕೆ ತಾಗಿ ಇಮಾಮು ಪುರ್ಬುವಿನ ಮನೆ. ಅವನು ತುಂಬಾ ಮೊದಲಿಂದಲೂ ಅಪ್ಪನಲ್ಲಿಗೇ ಕೆಲಸಕ್ಕೆ ಬರುತ್ತಿದ್ದದ್ದು.
ಇನ್ನೂ ಒಂದೆರಡು ಕೆಲಸಗಾರರ ಮನೆಗಳು ಬಿಟ್ಟರೆ ಬೇರೆ ಯಾರಿಲ್ಲ. ಮಂಚಿ ತಡ್ಕದಿಂದ ಉಯ್ಯಡ್ಕ ಮನೆ ತಲಪಬೇಕಾದರೆ ಎರಡು - ಮತ್ತೆರಡು ದಾರಿಗಳು. ಗುಡ್ಡ ಹತ್ತಿಯೇ ಹೋಗಬೇಕಾದ ಎರಡು ದಾರಿಗಳಲ್ಲಿ ಒಂದು
'ಗೆದ್ದಲು ಮೂಲೆ' ದಾಟಿ ಹೋಗುವುದು, ಇನ್ನೊಂದು 'ಅಂಬಟೆಕೊಚ್ಚಿ'ಗೇ ಹೋಗಿ ಹೋಗುವುದು.
ಇನ್ನೊಂದು ದಾರಿ ಮಾರ್ಗದ್ದು, ಅಂದರೆ ಅದು ರಸ್ತೆ. ಅದು ಬಹಳ ಸುತ್ತು! ನಡೆದುಹೋಗಲು ತುಂಬಾ ದೂರ. ಆದರೂ ಆ ದಾರಿ ಮೂಲಕ ಹಲವಾರು ಸಾರಿ ಆಟವಾಡುತ್ತ ಹೋಗಿದ್ದಿದೆ.
ಹಾ೦.. ಇನ್ನೊಂದು ದಾರಿಯಿದೆ, ಶಾಲೆಯ ಮೈದಾನದ ಆಚೆ ಬದಿಯಿಂದ 'ಕೂಡ್ಲು' ಗುಡ್ಡೆಗೆ ಹತ್ತಿ ಹೋಗುವ ದಾರಿ!
(ಇಲ್ಲಿಂದ ರಸ್ತೆಯೂ ಇದೆ.) ಈ ಗುಡ್ಡದ ದಾರಿ ಮಳೆಗಾಲದಲ್ಲಿ ಮಾತ್ರ ಬಹಳ ಪ್ರಿಯ ನಮಗೆ. ಏಕೆಂದರೆ ಮಳೆಗಾಲದಲ್ಲಿ ಮಾತ್ರ 'ಬೆಳ್ಳಿ' ತುಂಬಿ ಹರಿಯುತ್ತಾ ಇದ್ದದ್ದು!
ಹೌದಲ್ಲ, ಮಳೆಗಾಲದಲ್ಲಿ ಈ ದಾರಿ ಮಾತ್ರವೇ ಅಲ್ಲ, ಹಸಿರುಗುಡ್ಡೆಗಳ ಎಲ್ಲ ದಾರಿಗಳೂ ನಮಗೆ ಪ್ರಿಯ!! :)

ಅಕ್ಕ ಪುತ್ತೂರು ಪೇಟೆಯಿಂದ ತಂದುಕೊಟ್ಟ ಕೆಂಪು ಟೈ'ಯ ಫ್ರಾಕು ತೊಟ್ಟು, ಪುಸ್ತಕದ ವಯರು ಚೀಲದ ಕೈಯನ್ನು ಹಣೆಗೆ ಸಿಕ್ಕಿಸಿ, ಬೆನ್ನ ಹಿಂದಕ್ಕೆ ಚೀಲ ಇಳಿಬಿಟ್ಟು ( ಯಾವಾಗಲೂ ಅಲ್ಲ, ಕೆಲವೊಮ್ಮೆ ಮಾತ್ರ ಹೀಗೆ..)
ಉಯ್ಯಡ್ಕ ಗುಡ್ಡೆಯಿಂದ ಮಂಚಿತಡ್ಕ ಶಾಲೆಗೇ ಇಳಿಯುತ್ತಿದ್ದ ಆ ದಿನಗಳಲ್ಲಿ " ಉಯ್ಯಡ್ಕ ಧನಿಕ್ಕುಳೆ ಎಲ್ಯ ಬಾಲೆ " ( ಉಯ್ಯಡ್ಕ ಧಣಿಗಳ ಸಣ್ಣ ಮಗಳು) ಎಂದೇ ಕರೆಸಿಕೊಳ್ಳುತ್ತಿದ್ದಿದ್ದು!

(ಮುಂದುವರಿಯುವುದು...)