Thursday, 17 February 2011

ಕೆಳಗಿಳಿಯುವಂತಿಲ್ಲ ಎಂದೂ.


ಅವನ ಕೈ ಹಿಡಿದು ಏರಿ ಹೋದೆ ಮೆಟ್ಟಲುಗಳ ಮೇಲೆ. - ತಿರುಗಿ ಮೇಲೆ ಮೇಲೆ.
ಏರುತ್ತಿದ್ದಂತೆ ಒಂದೊಂದೆ ಜರಿದು ಬಿದ್ದವು ಹಿಂದೆ, ಈ ಮೊದಲು ಏರಿದವೆಲ್ಲ ಅಲ್ಲೆ!
ಇನ್ನೀಗ ಹೋದರೆ ಮೇಲೆಯೇ ಹೋಗಬೇಕು, ಕೆಳಗಿಳಿಯುವಂತಿಲ್ಲ ಎಂದೂ!
ಅವ ಕರೆದನೋ ನಾ ಹೋದೆನೋ ಅರ್ಥವಾಗದೆ ಹಿಂದುಮುಂದೊಂದೂ!

ಅದೊ ಅಲ್ಲಿ ತಂಪ್ತಂಪು ತಂಬೆಳಕ ರಾಶಿ, ಮೇಲಿನ್ನು ಮೆಟ್ಟಲುಗಳಿಲ್ಲ,
ಎಲ್ಲೆಲ್ಲು ಬೆಳ್ ಬೆಳಕು ಬಿಳಿ ನೊರೆಯ ತೊರೆಯಂತೆ, ತೋರ್ದಾತ ಮರೆತ ಸೊಲ್ಲ.
ಇನ್ನೀಗ ಬೇರೇನು ಬಾಧಿಸದ ಹಗುರತೆಯು, ಹಾ, ಬೇಕೆನಿಸುತಿಲ್ಲ ಒಂದೂ.
ಇನ್ನೀಗ ಇದ್ದರೆ ಅಲ್ಲಿಯೇ ಇರಬೇಕು, ಕೆಳಗಿಳಿಯುವಂತಿಲ್ಲ ಎಂದೂ!



Sunday, 6 February 2011

ನೆನಪು - ೭

'ಉಯ್ಯಡ್ಕ..' ಹೆಸರು ಹೇಳುತ್ತಿದ್ದರೆ ಮನಸು ಸಂತಸದ ಉಯ್ಯಾಲೆ ತೂಗಿದಂತೆ.., ಜೀವ ಹಿಗ್ಗಿ ಜೀಕಿದಂತೆ!

ಮೊದಲು ಮುಖಮಂಟಪವಿದ್ದಿದ್ದ ಮನೆ, ಅಂದರೆ ಮೂಲಮನೆ 'ಕಟ್ಟದ ಕೋರಿಕಾರಿ'ನಿಂದ ಅಜ್ಜ ಮತ್ತೆ ಅಪ್ಪ ಉಯ್ಯಡ್ಕ ದಲ್ಲಿ ಆಸ್ತಿ ಮಾಡಿಕೊಂಡು ಬಂದಾಗ ಕಟ್ಟಿದ ಮೊದಲಮನೆ.

(ಮತ್ತೆ ಆ ಸಮಯದಲ್ಲಿ ಅಜ್ಜಿ ಮೊದಲಬಾರಿ ಉಯ್ಯಡ್ಕಕ್ಕೆ ಬರುವಾಗ ಅವರನ್ನು ನಾಲ್ಕಾಳು ಜನರು 'ಮೇನೆ'ಯಲ್ಲಿ ಹೊತ್ತು ಕರೆತಂದಿದ್ದರಂತೆ!
ಮಿಕ್ಕಿದವರೆಲ್ಲರೂ ನಡೆದೇ ಬರುವವರು, ಗುಡ್ಡ ತಾನೇ, ರಸ್ತೆಯಿನ್ನೂ ಆಗಿರಲಿಲ್ಲವಲ್ಲ!! ಇರಲಿ..)

ಅನಂತರದಲ್ಲಿ ಅಪ್ಪ ಅದೇಕೋ ಆ ಮುಖಮಂಟಪವನ್ನೊಡೆಸಿ, ಮನೆ 'ಎಲ್' ಆಕೃತಿಯಲ್ಲಿ ಬರುವಂತೆ ಕಟ್ಟಿಸಿದ್ದು.

ಆದರೆ ಆ ಮುಖಮಂಟಪದ ಕಟ್ಟೆ - ಚಿಟ್ಟೆಗಳ ನೆನಪೆಷ್ಟು ಆಪ್ತ..
ಕಟ್ಟೆಯ ಕೆಳಬದಿಯ ಜಗುಲಿಯಲ್ಲೇ ಕಲ್ಲಾಟ.. ಕೆಲವೊಮ್ಮೆ ಸಂಜೆಗೆ ಮೊದಲು ಶಾಲೆಕೆಲಸವೂ ಅಲ್ಲೇ.. ಮತ್ತೆ ಅದೇ ಕಟ್ಟೆಯಿಂದ ಬಿದ್ದು ದೊಡ್ಡಕ್ಕನೂ ಪುಟ್ಟಕ್ಕನೂ ಕೈ ಮುರಿದುಕೊಂಡಿದ್ದು!

ಇಬ್ಬರು ಅಕ್ಕಂದಿರು, ದೊಡ್ಡವನು ಅಣ್ಣ, ಅಪ್ಪ - ಅಮ್ಮ , ಅಜ್ಜ - ಅಜ್ಜಿಯರ ಜೊತೆಯಿದ್ದ ಉಯ್ಯಡ್ಕಮನೆಯ ಪಡಸಾಲೆ - ದೇವರ ಮನೆ - ಊಟದ ಮನೆ, ಮತ್ತಲ್ಲಿನ ರಾತ್ರಿ - ಹಗಲುಗಳು, ಜೀವ ತುಂಬಿದ ಮನೆಯ ಮುಂದಿನ
ಪನ್ನೇರಳೆ ಮರ.. ಅದರಲ್ಲಿ ಅಪ್ಪ ಕಟ್ಟಿಸಿ ಕೊಟ್ಟ ದಪ್ಪ ಬಳ್ಳಿಯ, ಪುಟ್ಟ ಮಣೆಯ ಉಯ್ಯಾಲೆ..

ಶಾಲೆಗೆಂದು ಹೊರಟರೆ, ಮನೆ ಮೆಟ್ಟಲಿಳಿದು ಬಿಳಿ ಮಂಜೆಟ್ಟಿ ಗಿಡಗಳ ಬಳಸಿ, ಮುಂಡಪ್ಪ ಮಾವಿನ ಮರದ ಕೆಳಗಿಂದ ಹತ್ತು - ಹದಿನೈದು ಹೆಜ್ಜೆಗೆ ಸಣ್ಣದೊಂದು 'ಅಗರು' ದಾಟಿ,
ಅಲ್ಲೇ ಮುಂದೆ 'ಮೆಟ್ಲ ಸುರಂಗ' ದ ಬದಿಯಲ್ಲೇ ನಡೆದು ಕಮಲನ ಮನೆಯ ಹತ್ತಿರಕ್ಕೆ ಬಂದು ಅಲ್ಲಿನ್ನೊಂದು ಕಲ್ಲಿನ ದೊಡ್ಡ ಅಗರು ದಾಟಬೇಕು. ಅದು ಉಯ್ಯಡ್ಕ ಜಾಗದ ಬೌಂಡರಿ ಲೈನು.

ಅಗರು(ಕಾಂಪೌಂಡ್) ದಾಟಿದರೆ ಆಚೆಗೆ ಗವರ್ನಮೆಂಟಿನ ಬೀಜದ ಕಾಡು.. ಗೇರುಬೀಜದ ಮರಗಳ ಬ್ಲಾಕು.

ಕೆಲಸದ 'ಲಚ್ಮಿ'ಯ (ಲಕ್ಷ್ಮಿಯ) ಮಗಳು ಪೂವಕ್ಕು, ಚೋಮು, ಸಿವರಾಮ, ಇಮಾಮನ ಮನೆಯ ಜೊಕ್ಕಿ(ಜಾಕಿ), ದವಿದ(ಡೇವಿಡ್), ಎಲ್ಲ ಮಕ್ಕಳೊಂದಿಗೆ ಅಗರು ದಾಟಿ ಬರುವಾಗ ಅಲ್ಲೇ ಇರುವ ಇನ್ನೊಂದು ಕೇರಿ
ಮಕ್ಕಳೂ ಗುಂಪಾಗಿ ಸೇರಿಕೊಳ್ಳುತ್ತಿದ್ದರು. ಊರಿನ ಹಿರಿಯರು, ಪರಿಚಿತರು ಸಿಕ್ಕಾಗ ನಮ್ಮ ಗುಂಪು ಬೇರೆ - ಬೇರೆಯಾದರೂ ಅವರು ಯಾರೂ ಇಲ್ಲದಿದ್ದಾಗ ಎಲ್ಲರೂ ಆಟ ಆಡುತ್ತಿದ್ದುದು ಒಟ್ಟಾಗಿಯೇ.

ಈಗ, ಅವರು ದೊಡ್ಡ ಅಗರಿಗೆ ತಾಗಿದ ಹಾಗೆಯೇ ಮನೆಗಳನ್ನು ಮಾಡಿಕೊಂಡಿದ್ದಾರಾದರೂ ಅವರೆಲ್ಲ ಮೊದಲಿದ್ದಿದ್ದು ಉಯ್ಯಡ್ಕ ಗುಡ್ಡಕ್ಕೆ ಸೇರಿದಂತೆಯೇ ಇರುವ ಇನ್ನೊಂದು ಗುಡ್ಡದ ಮಧ್ಯ ಭಾಗದಲ್ಲಿ.

ಅಲ್ಲಿಗೇ ಹೆಸರು 'ಅಂಬಟೆ ಕೊಚ್ಚಿ'! ಆಗಲೇ ಹೇಳಿದೆನಲ್ಲ... ಅಲ್ಲಿ ಕೆಲವು ಹುಣಸೆ ಮರಗಳು , ಅಂಬಟೆ ಮರಗಳೂ ಇರುವುದು ನಿಜ.
ಸಣ್ಣ ಸಣ್ಣ ಕೆಲವು ಗದ್ದೆಗಳು.. ನೀರಿನ ಹೊಂಡಗಳು.
ಅಲ್ಲಿನ ಹುಣಸೆ ಹಣ್ಣಿನ ಮತ್ತು ಗುಡ್ಡದ ನೆಲ್ಲಿಕಾಯಿಗಳ ಆಸೆಯನ್ನು ಹತ್ತಿಕ್ಕಲಾಗದೆ "ಆ ದಾರಿಯಾಗಿ ಹೋಗಬೇಡಿ"ರೆಂಬ ದೊಡ್ಡವರ ಮಾತುಗಳಿಗೆ ಜಾಣ ಕಿವುಡುತನ ತೋರಿ ಆ ದಾರಿಯಾಗಿಯೇ ನುಗ್ಗುತ್ತಿದ್ದ ಹುಮ್ಮಸ್ಸು.

ಅಲ್ಲಿಯೇ ಇದ್ದದ್ದು ತನಿಯ'ನ ಅಮ್ಮ 'ದೇಯಿ'(ದೇವಿ?) ತೊಂಡಿಯ ಮನೆ. ಆ ಮನೆಯ ಮುಂದೆಯೇ ಹಾದುಹೋಗಬೇಕು.

ದೇಯಿ ಕಪ್ಪು ಬಣ್ಣದ ವೃದ್ಧ ಜೀವ. ಲಕ್ಷಣದ ಮುಖದವಳು.

ಅರುವತ್ತೈದೋ...ಎಪ್ಪತ್ತೋ.. ದಾಟಿದ ವಯಸ್ಸಿನಲ್ಲೂ ಅವಳ ಕಣ್ಣುಗಳಲ್ಲಿ ಹೊಳಪು..
ಸದಾ ಉತ್ಸಾಹದ ಬುಗ್ಗೆಯಂತೆ ಕೈಯಲ್ಲಿ ಕತ್ತಿಯೋ, ಅಡಿಕೆ ಹಾಳೆಯೋ, ತೆಂಗು ಸೋಗೆಯೋ ಹಿಡಿದು
ಎದುರಾಗುತ್ತಿದ್ದ ಅವಳ ಹಣೆ..ಕೆನ್ನೆಗಳಲ್ಲಿ ಬಾಗಿದ ಗೆರೆ ಗೆರೆ - ನೆರಿಗೆಗಳು, ಎಲೆ ತಿಂದು ಕೆಪಗಾದ ಬೊಚ್ಚು ಬಾಯಿ.. ಹರಿದೇ ಹೋಗಿದೆಯೇನೋ ಎನ್ನುವಂತೆ ಜೋಲುವ ಅವಳ ಕಿವಿಯ ತೂತುಗಳು..
ರವಕೆ ಇಲ್ಲದೆ, ಕತ್ತಿನ ಮಣಿಸರಗಳಿಗೇ ಸೆರಗು ಸಿಕ್ಕಿಸಿ, ಸೊಂಟಕ್ಕೆ ಎಳೆದು ಸುತ್ತಿದ, ಮೊಣಕಾಲ ಕೆಳಗಿನವರೆಗಿನ ಅವಳ ಸೀರೆ.. ಕತ್ತಿನ ಹಿಂದೆ ಅಂಬಟೆಯಷ್ಟೇ ಪುಟ್ಟದಾದ ನರೆಗೂದಲ ಗಂಟು..
ಕಂಡಾಗಲೆಲ್ಲ 'ಕುೡ ದೆತ್ತಿ'( ಚಿಕ್ಕೆಜಮಾನಿ) ಎಂದು ಬಹಳ ಗೌರವದಿಂದ, ಆತ್ಮೀಯತೆಯಿಂದ ಕರೆಯುತ್ತಿದ್ದವಳು.

ಆ ಇಳಿಜಾರು ಅಂಬಟೆಕೊಚ್ಚಿಯ ಗದ್ದೆಗಳಲ್ಲಿ ಇನ್ನೂ ಕೆಲವು ಹೆಣ್ಗಳ ಜೊತೆ ಸೇರಿ 'ನೇಜಿ' ನೆಡುವಾಗ ದೇಯಿ ಹಾಡುವ ರಾಗದ 'ಪಾಡ್ದನ'ಗಳನ್ನು ಕೇಳಬೇಕು!

ಚೆನ್ನಾಗಿ 'ಒಬೇಲೆ' ಹೇಳುತ್ತಾಳೆನ್ದೇ ಅವಳು ಆಪ್ತಳೆನ್ನಿಸುತ್ತಿದ್ದುದು. ಅವಳ ದನಿಗೆ ದನಿ ಸೇರಿಸಿ ಹಾಡಿದ ದಿನಗಳಲ್ಲಿ ಮನೆ ಸೇರುವಾಗ ಮುಸ್ಸಂಜೆ ಮೀರಿ ಅಮ್ಮನ ಕಣ್ಣುಗಳ ಆತಂಕಕ್ಕೆ ಗುರಿಯಾಗಿ ಅಲ್ಲೊಮ್ಮೆ ತಿರುಗಿ ದೇಯಿ'ಯ ಹಾಡುಗಳ

ಪುನರಾವರ್ತನೆಯಾದಾಗ ಅಮ್ಮನಿಂದ ಸಿಗುತ್ತಿದ್ದುದು ಮುಗುಳ್ನಗೆ; ಮತ್ತು ಬಿಗಿಯಪ್ಪುಗೆ!



(ಮುಂದುವರಿಯುವುದು...)

Monday, 3 January 2011

ನೆನಪು - 6

ಸ್ವರ ಸ್ವಲ್ಪ ದೂರದಿಂದಲೇ ಕೇಳುವುದು... " ವಂದಿಪೆ ನಿನಗೆ ಗಣನಾಥ... ಮೊದಲೊಂದಿಪೆ ನಿನಗೆ..."
ಪುಟ್ಟ ಕಣ್ಣುಗಳನ್ನು ಉರುಟುರುಟಾಗಿ ಅರಳಿಸಿ ಅತ್ತಿತ್ತ ತಿರುಗಿಸುತ್ತಲೇ ಪುಟ್ಟ ಕೈಗಳಿಂದ ಸ್ಕರ್ಟುಗಳನ್ನು ಜಗ್ಗಿ ಜಗ್ಗಿ ಹಿಡಿದೂ.. ಬಿಟ್ಟೂ.. ಮಾಡುತ್ತಾ,
ಕೆಲವೊಮ್ಮೆ ಅಂಗೈ ಬೆವರನ್ನು ಸ್ಕರ್ಟಿಗೊರೆಸುತ್ತ, ಪ್ರಾರ್ಥನೆ ಮುಗಿಯಿತೋ..,
ಎದ್ದೆನೋ..ಬಿದ್ದೆನೋ.. ಎಂದು ಮಕ್ಕಳೆಲ್ಲ ಓಡಿ ಬಂದು ತಮ್ಮ ತಮ್ಮ ಸ್ಥಳದಲ್ಲಿ ಧೊಪ್ಪನೆ ಕುಳಿತಾಗ ವೇದಿಕೆಯ ಮೇಲೆ ಇತರರ ಮಾತುಗಳು ಶುರು..

ಗಾಂಧೀ, ಸುಭಾಷಚಂದ್ರ , ಆಜಾದು, ನೆಹರು.. ಲಾಲ್ ಬಹಾದ್ದೂರ್.. ಹೆಸರುಗಳ ಮೇಲೆ ಹೆಸರುಗಳು..
ಪಾಠ ಪುಸ್ತಕಗಳಲ್ಲಿ ಕಂಡ ಅವರ ಚಿತ್ರಗಳಿಗೆ ಅವರವರ ಹೆಸರುಗಳನ್ನೂ ಸೇರಿಸುತ್ತಾ, ಆಕಾರಗಳಿಗೆ ಜೀವ ತುಂಬಿಸಿ,
ಅವುಗಳಿಗೆ ಚಲನೆ - ಮಾತುಗಳನ್ನು ಕೊಟ್ಟು ಕಲ್ಪನೆಯ ಚಿತ್ರ ಕಟ್ಟು ಕಟ್ಟುತ್ತ, ಕೆನ್ನೆಗೆ ಕೈ ಕೊಟ್ಟು ಕೇಳಿಯೇ ಕೇಳುತ್ತಿದ್ದ ಪುಟ್ಟ ಜೀವಗಳಿಗೆ
ಕಾರ್ಯಕ್ರಮ ಮುಗಿದ ನಂತರ ಸಿಗುವ ಪೆಪ್ಪೆರುಮಿಂಟಿನ ಸಿಹಿಯ ನೆನಪಾಗಿ, ನಾಲಗೆಯಲ್ಲಿ ನೀರು!
ಹಿರಿಯ ವಿದ್ಯಾರ್ಥಿಗಳು ಇಬ್ಬಿಬ್ಬರು ಬಾಗಿಲ ಪಕ್ಕದಲ್ಲಿ ಆಗಲೇ ಬುಟ್ಟಿ ತುಂಬಾ ಚಾಕೊಲೇಟು ಹಿಡಿದು ಸಿದ್ಧರಾಗಿ ನಿಂತಿರುತ್ತಿದ್ದರಲ್ಲ!!

ದೇಶಭಕ್ತಿಯ ದಿನಗಳು ಹೀಗಾದರೆ ಹಬ್ಬ- ಪೂಜಾದಿನಗಳು ಇನ್ನೂ ವಿಶೇಷವೆನಿಸುತ್ತಿದ್ದವು. ವಿಜಯದಶಮಿಯ ಶಾರದಾಪೂಜೆ ಇರಲಿ, ಚೌತಿಯ ಗಣೇಶನ ಪೂಜೆ ಇರಲಿ, ಕೊನೆಯಲ್ಲಿ ಪ್ರಸಾದ ರೂಪದಲ್ಲಿ
ಬೆಲ್ಲ ಕಲೆಸಿದ ಅವಲಕ್ಕಿ, ಬಾಳೆಹಣ್ಣುಗಳು ಸಿಗುತ್ತಿದ್ದವು.
ಪೂಜೆಗಿಂತ ಮೊದಲು ಮತ್ತು ಪೂಜೆ ಮುಗಿದ ಮೇಲೂ ಬಹಳ ಹೊತ್ತು ಭಜನೆಗಳನ್ನು ಹಾಡುವ ಕ್ರಮವಿತ್ತು.

ಎಲ್ಲ ಮುಗಿದ ಮೇಲೆ ಕಾಗದದಲ್ಲಿ ಹಾಕಿಕೊಟ್ಟ ಪ್ರಸಾದ ಬೆಲ್ಲದವಲಕ್ಕಿಯಲ್ಲಿ ಸ್ವಲ್ಪ ತಿಂದು, ಇನ್ನು ಮಿಕ್ಕಿದ್ದನ್ನು ಹಾಗೆಯೇ ಮಡಿಚಿಟ್ಟುಕೊಂಡು ಗುಂಪು-ಗುಂಪಾಗಿ ಮಕ್ಕಳು ಶಾಲೆಯಿಂದ ಹೊರಬಂದರೆ
ಕೆಲವರ ದಾರಿ ಶಾಲೆಯಿಂದ ಹಿಂದೆ - ಗುಡ್ಡಕ್ಕೆ.. ಇನ್ನು ಕೆಲವರು ಬಲಕ್ಕೆ, ಇನ್ನು ಕೆಲವರು ಎಡಕ್ಕೆ.. ಕೆಲವರು ಕೆಳಗೆ - ಮಂಚಿ ತಡ್ಕ ಪೇಟೆ(!)ಯ ಕಡೆ..
ಇನ್ನು ಕೆಲವರು ಇನ್ನೂ ಆಚೆ..ಆಟದ ಮೈದಾನದಿಂದಾಚೆ ಇರುವ ಗುಡ್ಡದ ಕಡೆಗೆ..
ಹೀಗೆ ಚದುಚದುರಿ ನಡೆಯುತ್ತಿದ್ದ ಪುಟ್ಟ ಮಕ್ಕಳಿಗೆ, ಉತ್ಸಾಹದ ಬುಗ್ಗೆಗಳಿಗೆ ಮಧ್ಯಾಹ್ನದ ಹನ್ನೆರಡು-ಒಂದು ಗಂಟೆಯ ಚುರುಗುಡುವ ಬಿಸಿಲಿನ ಪರಿವೆ ಎಲ್ಲಿ?

ದಾರಿಯುದ್ದಕ್ಕೂ ಕಾರ್ಯಕ್ರಮದ ಬಗ್ಗೆ, ಆ ಮಾಷ್ಟ್ರ ಬಗ್ಗೆ, ಈ ಹುಡುಗನ ಬಗ್ಗೆ, ಮಾತೋ..ಮಾತು.. ನಗು-ಚಟಾಕಿಗಳು... - ಬಾಯಲ್ಲಿ ಬೆಲ್ಲದ ಸಿಹಿ..
ಕಾಲ ಕೆಳಗೆ ಸಿಕ್ಕಿದ ಕೋಲನ್ನೆತ್ತಿಕೊಂಡು, ಪಕ್ಕದ ಪೊದೆಗಳ ಹಸಿರೆಲೆಗಳ ಮೇಲೆ ಸುಮ್ಮ ಸುಮ್ಮನೆ ಖಡ್ಗ ಪ್ರಹಾರವೆಂಬಂತೆ ಬೀಸುವ ಏಟುಗಳು..
ಶಿಸ್ತಿನಲ್ಲಿ ನಡೆಯುವ ಇರುವೆ ಸಾಲುಗಳನ್ನು ಕಾಲಿಂದ - ಕೋಲಿಂದ ತಪ್ಪಿಸಿ, ಅವನ್ನು ಚಲ್ಲಾಪಿಲ್ಲಿಯಾಗಿಸಿ, ಅವಕ್ಕೊಂದಷ್ಟು ಕಿರಿಕಿರಿ ಕೊಟ್ಟು,
ಮೇಲೆ ಹಾರುವ ಕಾಗೆಗೊಂದು ರೊಂಯ್ಯನೆ ಕಲ್ಲು ಬೀಸಿ, 'ಉಯ್ಯಡ್ಕ' ಗುಡ್ಡ ಹತ್ತಲು ಮೊದಲಿಟ್ಟರೆ ಗೇರು ಮರದಲ್ಲಿ ಅಡ್ಡಾಡುವ ಮಂಗಗಳು ಧಡಕ್ಕನೆದ್ದು ಪಕ್ಕದ ಮರಗಳಿಗೆ ಹಾರಿ ದೂರ ಕೂತು, ಹಲ್ಲು ಕಿಸಿಯುತ್ತಿದ್ದವು!

ಉಯ್ಯಡ್ಕ ಗುಡ್ದಕ್ಕೆಲ್ಲ ಅಪ್ಪನದೊಂದೇ ದೊಡ್ಡ ಮನೆ. ಅಲ್ಲಿ ವಿಶಾಲವಾದ ಅಂಗಳಕ್ಕೆ ತಾಗಿ ಇಮಾಮು ಪುರ್ಬುವಿನ ಮನೆ. ಅವನು ತುಂಬಾ ಮೊದಲಿಂದಲೂ ಅಪ್ಪನಲ್ಲಿಗೇ ಕೆಲಸಕ್ಕೆ ಬರುತ್ತಿದ್ದದ್ದು.
ಇನ್ನೂ ಒಂದೆರಡು ಕೆಲಸಗಾರರ ಮನೆಗಳು ಬಿಟ್ಟರೆ ಬೇರೆ ಯಾರಿಲ್ಲ. ಮಂಚಿ ತಡ್ಕದಿಂದ ಉಯ್ಯಡ್ಕ ಮನೆ ತಲಪಬೇಕಾದರೆ ಎರಡು - ಮತ್ತೆರಡು ದಾರಿಗಳು. ಗುಡ್ಡ ಹತ್ತಿಯೇ ಹೋಗಬೇಕಾದ ಎರಡು ದಾರಿಗಳಲ್ಲಿ ಒಂದು
'ಗೆದ್ದಲು ಮೂಲೆ' ದಾಟಿ ಹೋಗುವುದು, ಇನ್ನೊಂದು 'ಅಂಬಟೆಕೊಚ್ಚಿ'ಗೇ ಹೋಗಿ ಹೋಗುವುದು.
ಇನ್ನೊಂದು ದಾರಿ ಮಾರ್ಗದ್ದು, ಅಂದರೆ ಅದು ರಸ್ತೆ. ಅದು ಬಹಳ ಸುತ್ತು! ನಡೆದುಹೋಗಲು ತುಂಬಾ ದೂರ. ಆದರೂ ಆ ದಾರಿ ಮೂಲಕ ಹಲವಾರು ಸಾರಿ ಆಟವಾಡುತ್ತ ಹೋಗಿದ್ದಿದೆ.
ಹಾ೦.. ಇನ್ನೊಂದು ದಾರಿಯಿದೆ, ಶಾಲೆಯ ಮೈದಾನದ ಆಚೆ ಬದಿಯಿಂದ 'ಕೂಡ್ಲು' ಗುಡ್ಡೆಗೆ ಹತ್ತಿ ಹೋಗುವ ದಾರಿ!
(ಇಲ್ಲಿಂದ ರಸ್ತೆಯೂ ಇದೆ.) ಈ ಗುಡ್ಡದ ದಾರಿ ಮಳೆಗಾಲದಲ್ಲಿ ಮಾತ್ರ ಬಹಳ ಪ್ರಿಯ ನಮಗೆ. ಏಕೆಂದರೆ ಮಳೆಗಾಲದಲ್ಲಿ ಮಾತ್ರ 'ಬೆಳ್ಳಿ' ತುಂಬಿ ಹರಿಯುತ್ತಾ ಇದ್ದದ್ದು!
ಹೌದಲ್ಲ, ಮಳೆಗಾಲದಲ್ಲಿ ಈ ದಾರಿ ಮಾತ್ರವೇ ಅಲ್ಲ, ಹಸಿರುಗುಡ್ಡೆಗಳ ಎಲ್ಲ ದಾರಿಗಳೂ ನಮಗೆ ಪ್ರಿಯ!! :)

ಅಕ್ಕ ಪುತ್ತೂರು ಪೇಟೆಯಿಂದ ತಂದುಕೊಟ್ಟ ಕೆಂಪು ಟೈ'ಯ ಫ್ರಾಕು ತೊಟ್ಟು, ಪುಸ್ತಕದ ವಯರು ಚೀಲದ ಕೈಯನ್ನು ಹಣೆಗೆ ಸಿಕ್ಕಿಸಿ, ಬೆನ್ನ ಹಿಂದಕ್ಕೆ ಚೀಲ ಇಳಿಬಿಟ್ಟು ( ಯಾವಾಗಲೂ ಅಲ್ಲ, ಕೆಲವೊಮ್ಮೆ ಮಾತ್ರ ಹೀಗೆ..)
ಉಯ್ಯಡ್ಕ ಗುಡ್ಡೆಯಿಂದ ಮಂಚಿತಡ್ಕ ಶಾಲೆಗೇ ಇಳಿಯುತ್ತಿದ್ದ ಆ ದಿನಗಳಲ್ಲಿ " ಉಯ್ಯಡ್ಕ ಧನಿಕ್ಕುಳೆ ಎಲ್ಯ ಬಾಲೆ " ( ಉಯ್ಯಡ್ಕ ಧಣಿಗಳ ಸಣ್ಣ ಮಗಳು) ಎಂದೇ ಕರೆಸಿಕೊಳ್ಳುತ್ತಿದ್ದಿದ್ದು!

(ಮುಂದುವರಿಯುವುದು...)

Tuesday, 7 December 2010

ಬೇಕು - ಸೋಲಬೇಕು.

ಹೋದಾಗ ಬಂದಾಗ
ನಿಂತಾಗ ಕೂತಾಗ
ನಾನು ನಿನಗೆಲ್ಲವನು ಹೇಳಬೇಕು..

ಇದ್ದಾಗ ಇರದಾಗ
ನಕ್ಕಾಗ ಅತ್ತಾಗ
ನೀನು ನನ್ನೆಲ್ಲವನು ಕೇಳಬೇಕು..

ನಿದ್ದೆಯಲೋ ಎಚ್ಚರದಿ
ಕನಸಿನಲೋ ಕನವರಿಸಿ
ನಾವೀರ್ವರೂ ತೆರೆದ ಬಯಲಾಗಬೇಕು..

ನಾ ನಿನ್ನ ಎದೆ ದನಿಗೆ
ನೀ ನನ್ನ ಎದೆಯೊಳಗೆ
ಮೈ ಉದ್ದಕೂ ತೆರೆದ ಕಿವಿಯಾಗಬೇಕು..

ಅನಿಸಿದೆಲ್ಲವ ಹೇಳಿ
ಹೇಳಿದೆಲ್ಲವ ಅಳೆದು
ಅಳುವಳಿಸಿ ರಮಿರಮಿಸಿ ನಲಿಯಬೇಕು..

ನಿನಗೆಲ್ಲ ನಾ ಸೋತು
ನನಗೆಲ್ಲ ನೀ ಸೋತು
ಸೋಲಿನಿಂದಲೆ ಬದುಕು ಗೆಲ್ಲಬೇಕು..

---0---

Thursday, 2 December 2010

ನೆನಪು - 5

ಡ್ರಿಲ್ ಮಾಸ್ತರರ ನಿಜವಾದ ಹೆಸರೇನೆಂದು ಇಂದಿಗೂ ಗೊತ್ತಿಲ್ಲ. ಡ್ರಿಲ್ ಎಂಬ ಶಬ್ಧದೊಡನೆ ನೆನಪಾಗುವ ಶಿಸ್ತು ಅವರು. ಯಾವತ್ತೂ ಟಿಪ್ ಟಾಪು.. ಯಾವತ್ತೂ ಬಿಳಿ ಶರ್ಟು- ಕಪ್ಪು ಪ್ಯಾಂಟಿನಲ್ಲೇ ಇರುತ್ತಿದ್ದವರು.
ಕಪ್ಪು ಮೈ ಬಣ್ಣದವರೆಂದು ಹೇಳಬಹುದಾದರೂ ಒತ್ತಾದ ಕಪ್ಪು ಹುಬ್ಬುಗಳು, ತೀಕ್ಷ್ಣವಾಗಿ ಹೊಳೆಯುವ ಕಿರಿದಾದ ಕಣ್ಣುಗಳು ಮತ್ತು ತಿದ್ದಿದ ಮೂಗಿನಿಂದಾಗಿ 'ಲಕ್ಷಣ'ವೆನಿಸುವಂತಿದ್ದವರು.
ಶಾಲೆಯ ಹಿಂದಿನ ಎತ್ತರದ ಆಟದ ಮೈದಾನಿನಲ್ಲಿ ಮಕ್ಕಳನೆಲ್ಲ ಸರಿಯಾದ ಸಾಲು ಸಾಲಿನಲ್ಲಿ ನಿಲ್ಲಿಸಿ ವ್ಯಾಯಾಮ ಹೇಳಿಕೊಡುತ್ತಿದ್ದರು.. ತುಂಬಾ ನೀಟಾಗಿರುತ್ತಿತ್ತು.
ಈ ಡ್ರಿಲ್ ಮಾಷ್ಟ್ರು ಹಲ್ಲುಗಳೇ ಕಾಣದಂತೆ ನಗುತ್ತಿದ್ದುದು ವಿಶೇಷ! ನಗುವಾಗ ನಾಲಿಗೆಯನ್ನು ಪೆಪ್ಪರುಮಿಂಟಿನಂತೆ ಕೆನ್ನೆಯ ಒಳಬದಿಗೆ ಗುಂಡಗೆ ಮಡಿಚಿಟ್ಟುಕೊಂಡೆ ಇರುತ್ತಿದ್ದ ಕಾರಣ ಬಿಗಿದ ಬಾಯಿಯಿಂದ ಹಲ್ಲುಗಳು ಹೊರಗೆ ಕಾಣುತ್ತಲೇ ಇರಲಿಲ್ಲ.
ಇನ್ನೂ ಒಂದು ಹೇಳಬೇಕು.. ಪ್ರತಿಬಾರಿಯೂ ಅವರನ್ನು ಕಂಡಾಗಲೆಲ್ಲ ಕಾಗೆಯ ನೆನಪಾಗುತ್ತಿದ್ದದ್ದು..ಅ..ಅವರು ಕೂದಲು ಕತ್ತರಿಸಿಕೊಳ್ಳುತ್ತಿದ್ದ ಶೈಲಿಯಿಂದಾಗಿ!

ಸದಾ ಬಿಳಿಯ ವೇಷ್ಠಿ ಅಥವಾ ಬಿಳಿಯ ಗರಿ ಗರಿ ಪಂಚೆ ಮತ್ತು ಬಿಳಿಯ ಶರ್ಟಿನಲ್ಲೆ ಇರುತ್ತಿದ್ದ, ಮಾಸದ ಮುಗುಳ್ನಗೆಯ, ಮೃದು ಧ್ವನಿಯ ಹೆಡ್ ಮಾಸ್ತರರನ್ನು ಹಾಗೆಂದು ಕರೆಯುವುದೇ ಹೆಮ್ಮೆ ಎನಿಸುತ್ತಿತ್ತು.
ಅವರ ಮುಖದಲ್ಲಿ ಅದೆಷ್ಟು ಪ್ರಸನ್ನತೆ ಎಂದರೆ ಅವರನ್ನು ನೋಡಿದವರೆಲ್ಲ ಕ್ಷಣದಲ್ಲಿ ಆ ಪ್ರಸನ್ನತೆ-ಶುಭ್ರತೆಯನ್ನು ತಾವೂ ಅನುಭವಿಸಿಬಿಡುತ್ತಾರೇನೋ ಎನ್ನುವ ಹಾಗೆ.
ಅವರ ಕಣ್ಣ ರೆಪ್ಪೆಗಳು ನಮ್ಮ-ನಿಮ್ಮೆಲ್ಲರವುಗಳಿಗಿಂತ ಬಹಳಷ್ಟು ಹೆಚ್ಚು ಬಾರಿ ಬಡಿದುಕೊಳ್ಳುತ್ತಿದ್ದವು. ಭಾಷಣ ಮಾಡುವಾಗ ಕೆಲವೊಮ್ಮೆ ಹುಬ್ಬುಗಳು ಮೇಲೇರಿದರೆ, ಮತ್ತೆ ಕೆಲ ನಿಮಿಷಗಳ ಕಾಲ ಅವು ಹಾಗೆಯೇ ಅಲ್ಲಿಯೇ ಇದ್ದು, ಕಣ್ಣು ಮಿಟುಕಿಸದೆ ನೋಡುತ್ತಿದ್ದಂತೆ ಕಂಡರೆ, ಅವರು ಮಾತುಗಳಿಗೋಸ್ಕರ ಹುಡುಕಾಟ ನಡೆಸುತ್ತಿರುವರೇನೋ ಎಂದು ಎನಿಸಬಹುದಿತ್ತು.
ಅವರಿಗೆ ಹೆಚ್ಚಿನ ವಿದ್ಯಾಭ್ಯಾಸವಿದ್ದದ್ದಕ್ಕೋ ಏನೋ ಹೆಚ್ಚು ವಿನಯಶೀಲರಾಗಿ ಕಾಣುತ್ತಿದ್ದರು.

ಸ್ವಾತಂತ್ರ್ಯೋತ್ಸವ , ಗಾಂಧೀಜಯಂತಿ, ಗಣರಾಜ್ಯೋತ್ಸವ, ಅಧ್ಯಾಪಕರ ದಿನ, ಮಕ್ಕಳ ದಿನಾಚರಣೆ ಮುಂತಾದ ವಿಶೇಷ ದಿನಗಳಲ್ಲಿ ಇಡಿಯ ಶಾಲೆ ಒಂದೇ ದೊಡ್ಡ ಕೊಠಡಿ ಅಥವಾ 'ಹಾಲ್' ಆಗುತ್ತಿತ್ತು.
ಉಳಿದ ದಿನಗಳಲ್ಲಿ ಎಲ್ಲ ತರಗತಿಗಳ ವಿಂಗಡಣೆಯಾಗುತ್ತಿದ್ದದ್ದು ಗೋಡೆಗಳ ಬದಲಿಗೆ ಇರಿಸಲಾಗಿರುವ ತಟ್ಟಿಗಳಿಂದ! ಬಹುಶ: ಅವು ಬಿದಿರಿನ ತೆಳುಹಾಳೆಗಳಂತ ಪಟ್ಟಿಗಳನ್ನು ಹೆಣೆದು ತಯಾರಿಸಿದ್ದಿರಬೇಕು.
ಈ ಕಡೆಯಿಂದ ಒಂದು-ಎರಡು ತರಗತಿಗಳು ಶುರುವಾದರೆ, ಆ ತುದಿಗೆ - ಕೊನೆಯಲ್ಲಿ ಏಳನೆಯ ತರಗತಿ. ಅದು ವೇದಿಕೆಯ ಮೇಲೆ. ವಿಶೇಷ ದಿನಗಳಲ್ಲಿ ತಟ್ಟಿ, ಬೆಂಚುಗಳನ್ನೆಲ್ಲ ಬದಿಗೆ ಸೇರಿಸಿಟ್ಟು ವೇದಿಕೆಯ ಮೇಲೆ ಮೇಜು-ಕುರ್ಚಿ ಗಳನ್ನು ಜೋಡಿಸಲಾಗುತ್ತಿತ್ತು.
ಆಗೆಲ್ಲ ಎಷ್ಟು ಉತ್ಸಾಹ ಮಕ್ಕಳಿಗೆ! ಪುಸ್ತಕದ ಚೀಲಗಳನ್ನು ಮನೆಯಲ್ಲೇ ಬಿಟ್ಟು, ಕರ್ಚೀಫೊನ್ದನ್ನೇ ಕೈಯಲ್ಲಿ ಹಿಡಿದುಕೊಂಡೋ.. ಜೇಬಿಗೆ ತುರುಕಿಕೊಂಡೋ.. ಬಂದ ಬಣ್ಣ-ಬಣ್ಣದ ಅಂಗಿಯ ಮಕ್ಕಳಿಗೆ ಬೆಳಗಿನಿಂದಲೇ ಏನೋ ಸಂಭ್ರಮ..
ಒಂದೊಂದು ಚೌಕಳಿಯಲ್ಲಿ ಒಬ್ಬೊಬ್ಬರು ಎಂಬ ಹಾಗೆ ಸಾಲು-ಸಾಲಾಗಿ ನೆಲದ ಮೇಲೆ ಕುಳಿತು ಕೊಳ್ಳುವಾಗ ಪ್ರೀತಿಯ ಗೆಳತಿಯರು ತಮ್ಮ ಅಕ್ಕ-ಪಕ್ಕದಲ್ಲೇ ಕೂರಬೇಕು ಎಂಬ ತವಕ ಜೊತೆಗೆ. ತಮ್ಮ ತಮ್ಮ ಅನಿಸಿಕೆಗಳನ್ನು ಪರಸ್ಪರ ಪಿಸುಗುಡುವ ಮತ್ತೆ ಯಾವುದಕ್ಕಾದರೂ ಕಿಸಕ್ಕನೆ ನಗುವ ಅವಕಾಶವಿತ್ತಲ್ಲ ಅಲ್ಲಿ, ಅದಕ್ಕೆ!
ಹುಡುಗರೆಲ್ಲ ಹಾಲಿನ ಬಲ ಭಾಗಕ್ಕೆ ಮತ್ತೆ ಹುಡುಗಿಯರೆಲ್ಲ ಎಡಭಾಗಕ್ಕೆ ಕೂರಬೇಕು. ಆ ಕಡೆ, ವೇದಿಕೆಯಲ್ಲಿ ಭಾಷಣ ಮಾಡಲು ಆಯ್ಕೆಗೊಂಡ ರಾಜೆಶನಿಗೋ..ಶಶಿಧರನಿಗೋ, ಈ ಕಡೆ ಜಯಂತಿಗೋ..ಶ್ಯಾಮಲಗೋ.. ಮೈಯೆಲ್ಲಾ ಗಡಿಬಿಡಿ, ನಡುಕ.
ಗಳಿಗೆಗೊಮ್ಮೆ ಬರೆದು ತಂದ ಪುಟಗಳನ್ನೂ ತಿರುವುತ್ತ, ಹಣೆಯ ಮೇಲಿನ ಮಣಿಸಾಲು ಒರೆಸುತ್ತಾ, ವೇದಿಕೆಗೂ ಅಲ್ಲಿಂದ ಮುಖ್ಯ ಬಾಗಿಲಿಗೂ ಕ್ಷಣ-ಕ್ಷಣ ಕಣ್ಣು ಹೊರಳಿಸುತ್ತ..ಕಾಯುವುದೇ ಅವರ ಕೆಲಸ. ಇನ್ನುಳಿದವರಿಗೆ ಗುಸು..ಗುಸು, ಏನೋ ಮಾತು.
ಹಗುರವಾಗಿ ಮೂಗಿನತ್ತ ತೇಲಿ ಬರುವ ಊದಿನಕಡ್ಡಿಯ ಪರಿಮಳದ ಜೊತೆಗೆ ಹೆಣ್ಣುಮಕ್ಕಳ ತಲೆಯ ತರಹೇವಾರಿ ಹೂಗಳ, ಹಚ್ಚಿದ ಕೊಬ್ಬರಿ ಎಣ್ಣೆಯ ವಾಸನೆ..
ಅಷ್ಟರಲ್ಲಿ ಇದ್ದಕ್ಕಿದ್ದಂತೆ ಏನೋ ಗಡಿಬಿಡಿ, ಎಲ್ಲ ಕಡೆಗಳಿಂದ. ಹೂಗುಚ್ಛ, ಹಾರಗಳ ಹಿಡಿದು ಮಾಸ್ತರುಗಳ ಓಡಾಟ.. ಮುಖ್ಯ ಅತಿಥಿಗಳ ಆಗಮನ. ಊರಿನ, ಅಥವಾ ಪರಊರುಗಳ ಹಿರಿಯರೇ ಈ ಸ್ಥಾನಗಳನ್ನು ಅಲಂಕರಿಸುವವರು ಹೆಚ್ಚಾಗಿ.
ವೇದಿಕೆಗೆ ಎಲ್ಲರೂ ಬಂದ ಮೇಲೆ ಹಾರಾರ್ಪಣೆ, ಚಪ್ಪಾಳೆಗಳು, ಮತ್ತೆ ದಟ್ಟ ಬಣ್ಣದ, ದೊಡ್ಡ ದೊಡ್ಡ ಹೂಗಳ ಲಂಗ ಧರಿಸಿದ ಪುಟ್ಟ ಪುಟ್ಟ ಹೆಣ್ಣುಮಕ್ಕಳಿಂದ ಪ್ರಾರ್ಥನೆ. ಎಷ್ಟು ಕತ್ತು ಮೇಲೆತ್ತಿದರೂ ಮೈಕಿನ ಹತ್ತಿರ ಹೋಗಲಾಗದ ಕತ್ತುನೋವಿನಿಂದ ನಡುನಡುಗುವ ಸ್ವರಗಳು, ಸ್ವಲ್ಪ ದೂರದಿಂದಲೇ ಎಂಬಂತೆ ಕೇಳುವುದು.. - " ವಂದಿಪೆ ನಿನಗೆ ಗಣನಾಥ.. ಮೊದಲೊಂದಿಪೆ....."



(ಮುಂದುವರಿಯುವುದು.)

Friday, 19 November 2010

ನೆನಪು - ೪


ಮನಸ್ಸಿಗೆ ಹತ್ತುವಂತೆ ಉತ್ತಮ ರೀತಿಯಲ್ಲಿ ಪಾಠ ಮಾಡುತ್ತಿದ್ದವರು ಗಣೇಶ ಮಾಸ್ತರರು. ಶಾಲೆಯ ವಾರ್ಷಿಕ ಪತ್ರಿಕೆ ' ತೊದಲುನುಡಿ'ಗೆಂದು ಕತೆ-ಕವನ-ಚುಟುಕು ಮತ್ತೆ ಪ್ರಬಂಧಗಳನ್ನು ಅವರ ಕೈಗೊಪ್ಪಿಸುತ್ತಿದ್ದಾಗ ಮೆಚ್ಚುಗೆ-ಸಂತೋಷ ವ್ಯಕ್ತ ಪಡಿಸಿದ್ದರು.

ಇವರ ಕಣ್ಣುಗಳು ವಿದ್ಯಾರ್ಥಿನಿಯರ ಮೇಲೆ ಸ್ವಲ್ಪ ಹೆಚ್ಚೇ ಎಂಬಂತೆ ಓಡಾಡುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯ. ಮತ್ತು ಒಂಥರಾ ಕಸಿವಿಸಿ..ಮುಜುಗರ.

ಪಾಠ ಮಾಡುತ್ತಾ ನಡುನಡುವೆ ಎಲ್ಲಾದರೂ ಕಣ್ಣಿಗೆ ಕಣ್ಣು ಸೇರಿದಾಗ ಪಟಕ್ಕನೆ ಸಣ್ಣದಾಗಿ ಕಣ್ಣು ಹೊಡೆಯುವುದು ಇವರ ಚೇಷ್ಟೆಗಳು. ( ಮುಖ ನೋಡದ ಹೊರತು ಪಾಠದಲ್ಲಾಗಲಿ ಆಡುವ ಮಾತಿನಲ್ಲಾಗಲಿ ಏಕಾಗ್ರಹಿಸುವುದು ನನ್ನಂತವರಿಗೆ ಸ್ವಲ್ಪ ಕಷ್ಟ! ) "ಬೆಕ್ಕು ಕಣ್ಣು ಮುಚ್ಚಿ.... " ಗಾದೆಯನ್ನು ಇವರು ಕೇಳೆ ಇರಲಿಲ್ಲವೇನೋ !

ಪರೀಕ್ಷೆಯ ನಂತರ ಉತ್ತರ ಪತ್ರಿಕೆ ಹಂಚುವಾಗ, ಹೆಸರು ಕರೆದಾಕ್ಷಣ ಮೇಜಿನ ಹತ್ತಿರ ಹೋಗುವುದಕ್ಕಿತ್ತಲ್ಲ, ಆಗ ಉತ್ತರ ಪತ್ರಿಕೆ ಕೊಡದೆ ಹತ್ತಿರ ಹತ್ತಿರ ಇನ್ನೂ ಹತ್ತಿರ ಕರೆದು ಭುಜದ ಮೇಲೆ ಕೈ ಬಳಸಿ ತಂದು ಮೈಗಾನಿಸಿಕೊಂಡು, ಅದೂ ಇದೂ ತಪ್ಪು-ಸರಿಗಳ ವಿಮರ್ಶೆ ಮಾಡುತ್ತ ರಟ್ಟೆಯ ಮೇಲೆ ಕೈಬೆರಳುಗಳಿಂದ ಬಿಗಿಯಾಗಿ ಒತ್ತಿ ನೋಯಿಸದಿದ್ದರೆ ಅವರಿಗೆ ತಿಂದ ಅನ್ನ ಮೈಗೆ ಹಿಡಿಯುತ್ತಿರಲಿಲ್ಲವೇನೋ..

ಆವಾಗೆಲ್ಲ ಕಣ್ಣಲ್ಲಿ ನೀರು..ಮನಸಲ್ಲಿ ಹಿಡಿ ಶಾಪ. ನೋಯಿಸಿಕೊಂಡವರಿಗೆ ಗೊತ್ತು ಆ ಕಷ್ಟ! ನೋಡುತ್ತಿರುವ ಇತರ ವಿದ್ಯಾರ್ಥಿಗಳಿಗೆಲ್ಲ ಆಟಕ್ಕೊಂದು-ಮಾತಿಗೊಂದು ಸುಲಭ ವಸ್ತು!

ಕೆಲವೊಮ್ಮೆ ಅವರ ಅನಿರೀಕ್ಷಿತ ಕಚಗುಳಿಗೆ, ತಡೆಯಲಾಗದೆ ನಕ್ಕುಬಿಟ್ಟರಂತೂ ಮುಗಿಯಿತು! - ಗಣೇಶ ಮಾಸ್ತರರ ಹೆಸರಿನ ಜೊತೆ ಅವರ ಹೆಸರುಗಳು ಮಾರನೆಯ ದಿನವೇ ಅಥವಾ ಮುಂದಿನ ದಿನಗಳಲ್ಲಿ ಶಾಲೆಯ ಹಿಂದಿನ ಗೋಡೆಗಳಲ್ಲಿ ವಿರಾಜಮಾನ ಕಟ್ಟಿಟ್ಟಿದ್ದೇ.

ಆರು-ಏಳನೆಯ ತರಗತಿಯ ಹೆಣ್ಣು ಮಕ್ಕಳಲ್ಲಿ ಹಲವರು ಈ ಕಾರಣ ಹಲವಾರು ರಾತ್ರಿಗಳ ನಿದ್ದೆ ಬಿಟ್ಟಿರಬಹುದೆಂದು ನಿಶ್ಚಯವಾಗಿಯೂ ಹೇಳಬಹುದು.

ಇನ್ನು ಡ್ರಿಲ್ ಮಾಸ್ತರು, ಹಿಂದಿ ಟೀಚರು ನೆನಪಾಗುತ್ತಾರೆ.

ಹಿಂದಿ ಟೀಚರು ಕಥೆ ಪುಸ್ತಕಗಳಲ್ಲಿ ಓದುತ್ತಿದ್ದ ಹಾಗೆ - ತೆಳ್ಳಗೆ..ಬೆಳ್ಳಗೆ ನೀಳ ಜಡೆ..ಪುಟ್ಟ ಶರೀರ.. ಬಣ್ಣ-ಬಣ್ಣದ ಹೂಗಳ ಸೀರೆ, ತೆಳ್ಳಗಿನ ಬಿಳಿಯ ಕೈಗೆ ಕಪ್ಪು ರಿಸ್ಟ್ ವಾಚು, ಹೆಗಲ ಮೇಲಿಂದ ಹಾಕಿಕೊಳ್ಳುತ್ತಿದ್ದ ಕಪ್ಪು ಹ್ಯಾಂಡ್ ಬ್ಯಾಗು, ಎಣ್ಣೆ ಸ್ವಲ್ಪ ಹೆಚ್ಚಾಗಿಯೇ ಹಾಕಿದರೂ ನೀಟಾಗಿ ಬಾಚಿ ಹೆಣೆದ ಉದ್ದ ಜಡೆ. ಒಟ್ಟಿನಲ್ಲಿ ನೀಟು-ನೀಟಾಗಿ ಕಾಣುವವರು, ಮತ್ತು ಶಿಸ್ತಾಗಿ ಪಾಠ ಮಾಡುತ್ತಿದ್ದವರು ಕೂಡಾ.

ಆದರೆ ' ಛೇ ' ಎಂದನ್ನಿಸುತ್ತಿದ್ದುದು ಅವರ ಕೊಂಚ ಉಬ್ಬಿದ ಹಲ್ಲು, ಮತ್ತೆ ಅದರ ಮೇಲಿನ ಕಪ್ಪು ಗರಗಸದಂತೆ ಕಾಣುತ್ತಿದ್ದ ಸರಿಗೆಯ ಪಟ್ಟಿ. ಮತ್ತೆ ಪಾಠ ಮಾಡುತ್ತಿದ್ದಾಗ ಬಾಯ ಎರಡೂ ತುದಿಗಳಲ್ಲಿ ಒಸರುತ್ತಿದ್ದ ಎಂಜಲು..
ಆಗೆಲ್ಲ ಅವರನ್ನು ನೋಡುತ್ತಿದ್ದ ಮಕ್ಕಳೇ ಅವರ ಪರವಾಗಿ ಎಂಜಲು ನುಂಗಿಕೊಳ್ಳುತ್ತಿದ್ದಿದ್ದು..

ಅವರೆಷ್ಟು ಪುಟ್ಟ ಆಕಾರವೆಂದರೆ ಸಿಟ್ಟು ಬಂದಾಗ ಸ್ಕೇಲನ್ನು ಕೈಗೆತ್ತಿಕೊಂಡು ಜೋರು ಮಾತಾಡುತ್ತಿದ್ದರೆ, ಕೈ, ಕೈಯಲ್ಲಿನ ಸ್ಕೇಲು, ಅಷ್ಟಲ್ಲ, ಇಡಿಯ ಮೈಯೆಲ್ಲ ಥರ ಥರ ಕಂಪನ. ಆಗೇನಾದರೂ ಅವರನ್ನು ಸ್ವಲ್ಪ ಜೋರಾಗಿ ದೂಡಿದಿರೋ, ಅಥವಾ 'ಫೂ..' ಎಂದೇನಾದರೂ ಗಾಳಿಯೂದಿದಿರೋ, ಬಿದ್ದೇ ಬಿದಬಹುದಾದಷ್ಟು ಪುಟಾಣಿ ಜೀವ!

ಏನಿದ್ದರೂ ದಿನ ಬಿಟ್ಟು ದಿನ ಅವರು ಮುಡಿದುಕೊಳ್ಳುತ್ತಿದ್ದ ಥರ-ಥರದ ಹೂವುಗಳು.. ಅದರಲ್ಲೂ ನೀರ ಹನಿ ಹೊತ್ತು ಎರಡೇ ಎರಡು ಹಸಿರೆಲೆಯ ನಡುವೆ ನಗುವ ಪನ್ನೀರ ಗುಲಾಬಿ..ನೋಡುವುದೇ ಕಣ್ಣಿಗೊಂದು ಹಬ್ಬ!

ಇನ್ನು ಡ್ರಿಲ್ ಮಾಸ್ತರ ಬಗ್ಗೆ ಬರೆಯುವುದಾದರೆ ಅವರು ವಾರದಲ್ಲಿ ಎರಡು, ತಪ್ಪಿದರೆ ಮೂರು ದಿನ ಮಾತ್ರವೇ ಕಾಣುತ್ತಿದ್ದುದು.


(ಮುಂದುವರಿಯುವುದು...)

Sunday, 31 October 2010

ನೆನಪು - 3

ನೆತ್ತಿಯಿಂದ ಸ್ವಲ್ಪ ಹಿಂದಿನವರೆಗೆ ಕೂದಲೆಲ್ಲ ಉದುರಿ ಬೋಳಾಗಿ ಅಗಲವಾದ ಹಣೆ ಎಂಬಂತೆ ಕಾಣುವ, ಶರೀರದಲ್ಲಿ ದಪ್ಪಗೆ, ಕುಳ್ಳಗೆ - ಯಾವಾಗಲೂ ತೂಕಡಿಸುತ್ತಲೇ ಇರುವಂತೆ ಕಾಣುವ, ಸ್ವಲ್ಪ ತೊದಲುತ್ತಾರೇನೋ ..ಎಂಬಂತೆ ಮಾತಾಡುವ, ಮಹೇಶ್ವರ ಮಾಸ್ತರರು ಒಂದನೆಯ ಕ್ಲಾಸಿಗೆ. ಕಾಯಿಗೆ ಕಾಯಿ - ಕಡ್ಡಿಗೆ ಕಡ್ಡಿ ಸೇರಿಸಿ ಒಂದು - ಎರಡು ಕಲಿಸಿದವರು. ಒಂದೊಂದೇ ಬೆಂಚಿನ ಮಕ್ಕಳಿಗೆ ಮಗ್ಗಿ ಹೇಳಿಸುತ್ತಿದ್ದಾಗ, ಮಕ್ಕಳೆಲ್ಲ ಹೆಗಲಿಂದ ಹೆಗಲಿಗೆ ಕೈಗಳನ್ನು
ಸೇರಿಸಿಕೊಂಡು ಹಿಂದಕ್ಕೂ ಮುಂದಕ್ಕೂ ತೂಗುತ್ತ, ರಾಗವಾಗಿ ' ಒಂದೊಂದ್ಲೊಂದು.. ಒಂದೆರಡ್ಲೆರಡು ..' ಮಗ್ಗಿ ಹೇಳುತ್ತಾ ಇದ್ದದ್ದು ನೆನಪಾದೆರೆ ಸಣ್ಣ ನಗು ತೇಲಿ ಬರುತ್ತದೆ. ಮಹೇಶ್ವರ ಮಾಸ್ತರು ಬಹಳ ಸಮಾಧಾನಸ್ಥರು, ನಿಧಾನಸ್ಥರು ಕೂಡಾ. ಅವರು ಒಂದನೆಯ ತರಗತಿಯನ್ನು ಬಿಟ್ಟು ಇನ್ನೊಂದಕ್ಕೆ ಹೋಗಿದ್ದು ಕಾಣೆ.

ಸ್ವಂತ ಅಭಿಪ್ರಾಯವೇ ಇಲ್ಲವೇನೋ ಎಂಬಂತಿರುವ, ಸದಾ ಇನ್ನೊಬ್ಬರ ಮಾತನ್ನೇ ಒಪ್ಪುವಂತೆ ತಲೆದೂಗುತ್ತ ನಡೆಯುವ, 'ನಾಗರ ಹಾವೇ..ಹಾವೊಳು ಹೂವೆ ' ಹೇಳಿಕೊಟ್ಟ, ಕನ್ನಡಕ ಹೊತ್ತ ಸೌಮ್ಯ ಮೊಗದ ಜಯದೇವ ಮಾಸ್ತರರು ಎರಡನೆಯ ತರಗತಿಗೆ.

ಶಿಸ್ತಿನ ಸಿಪಾಯಿಯಾಗಿ, ಕಟ್ಟುನಿಟ್ಟಾಗಿ ಲೆಕ್ಖಪಾಠ ಮಾಡುತ್ತಿದ್ದ ಆನಂದರಾಯರು ಆನಂದವಾಗಿ ಇರುತ್ತಿದ್ದದ್ದು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಾತ್ರ ! ನಾಟಕಗಳು - ಸ್ಪರ್ಧೆಗಳು - ಪ್ರಬಂಧ - ಚರ್ಚೆಗಳು ಇತ್ಯಾದಿ ಸಮಯಗಳಲ್ಲಿ ಕಟ್ಟುಪಾಡುಗಳ ಗೆರೆ ದಾಟಿ ಮುಂದೆ ಬಂದು ಹೇಳಿಕೊಡುತ್ತ ಬಹಳ ಆತ್ಮೀಯರೆನಿಸುತ್ತಿದ್ದರು ! (ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾಟಕ ರಿಹರ್ಸಲ್'ಗಳ ಅವರ ಒಡನಾಟದವನ್ನು
ನೆನೆದರೆ ಹೆಮ್ಮೆಯೆನಿಸುತ್ತದೆ !) ಆದರೆ ಲೆಕ್ಖ ಹೇಳಿಕೊಡುತ್ತಿದ್ದಾಗ ಐದನೆಯ ಬಾರಿಯೂ ತಪ್ಪು ಮಾಡಿದ್ದಕ್ಕೆ ಚಾಚಿದ ಅಂಗೈ ಮೇಲೆ ನಾಗರ ಬೆತ್ತದ ಏಟೊಂದು ಪಟ್ಟನೆ ಬಿದ್ದ ನೆನಪಾಗಿ ಈಗಲೂ ಕೈ ಚುರುಗುಟ್ಟುತ್ತದೆ !
ಏಕೆಂದರೆ ಅದೊಂದೇ ಏಟು ಸಮಗ್ರ ಶಾಲಾ ಜೀವನದಲ್ಲಿ ಸಿಕ್ಕಿದ್ದು !!

ಮಿತಭಾಷಿ ಚಂದ್ರಶೇಖರ ಮಾಸ್ತರರು , ಮತ್ತೆ ವಿಜ್ಞಾನದ ವೆಂಕಟರಮಣ ಮಾಸ್ತರರಂತೂ ಸಿಟ್ಟು ಬಂದಾಗ ಬಾಯಿಯನ್ನು ಬಿಗಿಯಾಗಿ ಮುಚ್ಚಿ ಹಿಡಿದು ದವಡೆ ಹಲ್ಲನ್ನು ಮಾತ್ರ ಮಸೆಯುತ್ತಿದ್ದವರು. ಹೊರಗಿಂದ ನೋಡುವವರಿಗೆ ಕಿವಿಯಿಂದ ಕೆಳೆಗೆ
ಎಲುಬುಗಳು ಮೇಲಕ್ಕೂ - ಕೆಳಕ್ಕೂ ಆಡುವುದು ಚೆನ್ನಾಗಿ ಕಾಣುವಂತಿರುತ್ತಿತ್ತು !

ಲೆಕ್ಖ - ವಿಜ್ಞಾನಗಳನ್ನು ಇನ್ನೂ ಒಬ್ಬರು ಹೇಳಿಕೊಡುತ್ತಿದ್ದವರು ಗಣೇಶ ಮಾಸ್ತರರು.

( ಮುಂದುವರಿಯುವುದು.. )